
ಈರೋಡ್/ತಮಿಳುನಾಡು: ಕರೂರಿನಲ್ಲಿ ಸೆಪ್ಟೆಂಬರ್ 27ರಂದು ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ಸಾರ್ವಜನಿಕ ಸಭೆ ಗುರುವಾರ ಇಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು. ‘ತಮಿಳುನಾಡಿನಲ್ಲಿ 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯು ಒಳಿತು ಮತ್ತು ಕೆಡುಕಿನ ನಡುವಿನ ಹೋರಾಟ. ಡಿಎಂಕೆ ನಮ್ಮ ರಾಜಕೀಯ ಶತ್ರುವಾದರೆ, ಬಿಜೆಪಿ ನಮ್ಮ ಸೈದ್ಧಾಂತಿಕ ಶತ್ರು. ಡಿಎಂಕೆಯನ್ನು ಅಧಿಕಾರದ ಸಿಂಹಾಸನದಿಂದ ಕೆಳಗಿಳಿಸಿ’ ಎಂದು ಅವರು ಜನರಲ್ಲಿ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ, ದಿವಂಗತ ಎಂಜಿಆರ್ ಮತ್ತು ಜೆ. ಜಯಲಲಿತಾ ಅವರ ಹೇಳಿಕೆಯನ್ನು ಸ್ಮರಿಸಿದ ವಿಜಯ್, ಡಿಎಂಕೆಯನ್ನು ‘ದುಷ್ಟ ಶಕ್ತಿ’ ಎಂದು ಕರೆದರು. ‘ಡಿಎಂಕೆ ದುಷ್ಟಶಕ್ತಿಯಾದರೆ, ಟಿವಿಕೆ ಶುದ್ಧ ಶಕ್ತಿಯಾಗಿದೆ’ ಎಂದರು.
ಡಿಎಂಕೆ ಮತ್ತು ಸಮಸ್ಯೆಗಳು ಸ್ನೇಹಿತರಿದ್ದಂತೆ. ಅವು ಒಂದೊಕ್ಕೊಂದು ಪರಸ್ಪರ ಅಂಟಿಕೊಂಡಿವೆ. ರಾಜ್ಯದ ಅರಿಶಿನ ಬೆಳೆಗಾರರ ಹಿತವನ್ನು ಡಿಎಂಕೆ ಕಡೆಗಣಿಸಿದೆ ಎಂದು ದೂರಿದರು.
ಚುನಾವಣಾ ಸಭೆಗಳಲ್ಲಿ ಸಿನೆಮಾ ಡೈಲಾಗ್ ಹೇಳುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ್, ‘ಸಿ.ಎಂ. ಸರ್ (ಮುಖ್ಯಮಂತ್ರಿ ಸ್ಟಾಲಿನ್) ನಿಮ್ಮ ‘ವ್ಯಕ್ತಿತ್ವ’ದ ಬಗ್ಗೆ ಹೇಳಿ ಎಂದು ಸವಾಲೆಸೆದರು. ‘ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ವ್ಯಕ್ತಿತವನ್ನು ಅರ್ಥಮಾಡಿಕೊಳ್ಳಬೇಕು. 2026ರ ಚುನಾವಣೆಯಲ್ಲಿ ಜನರು ಈ ‘ವ್ಯಕ್ತಿತ್ವ’ದ ಭವಿಷ್ಯ ನಿರ್ಧರಿಸುತ್ತಾರೆ’ ಎಂದರು. ತಮಿಳು ಸಿನೆಮಾದಲ್ಲಿ ‘ವ್ಯಕ್ತಿತ್ವ’ ಎಂಬ ಡೈಲಾಗ್ ಜನಪ್ರಿಯವಾಗಿದೆ.
ಸಭೆಯ ಬಳಿಕ ವಿಜಯ್, ಕಾಂಚೀಪುರಂನ ಆಯ್ದ ಕೆಲವು ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.