
ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ
-ಪಿಟಿಐ ಚಿತ್ರ
ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳ ಪೈಕಿ ಎಲ್ಲಿ ಆಡಳಿತ ಪಕ್ಷದ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೋ ಅಲ್ಲಿ ಆಯ್ಕೆಯನ್ನು ರದ್ದು ಮಾಡಿ ಮರುಚುನಾವಣೆ ನಡೆಸುವಂತೆ ಮಹಾರಾಷ್ಟ್ರ ರಾಜ್ಯದ ಚುನಾವಣಾ ಆಯೋಗಕ್ಕೆ ಶಿವಸೇನಾ(ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ. ಆ ವಾರ್ಡ್ಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮರು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ಅವರೊಂದಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉದ್ಧವ್, ಡೆಮಾಕ್ರಸಿ ಬದಲಿಗೆ ಮೋಬೊಕ್ರಸಿ ವಾತಾವರಣ ದೇಶದಲ್ಲಿದೆ ಎಂದು ಟೀಕಿಸಿದ್ದಾರೆ.
ಮುಂಬೈ ಸ್ಥಳೀಯ ಸಂಸ್ಥೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಠಾಕ್ರೆ ಸಹೋದರರು, ಮರಾಠಿ ಭಾಷೆಯನ್ನು ಗೌರವಿಸಬೇಕು. ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಳ ಮೇಯರ್ ಮರಾಠಿಗರೇ ಆಗಬೇಕು ಎಂದು ಹೇಳಿದರು.
ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಸಂಪತ್ತನ್ನು ಗುತ್ತಿಗೆದಾರರಿಗೆ ಪೋಲು ಮಾಡಲಾಗುತ್ತಿದೆ. ಬಿಎಂಸಿಯ ಬಜೆಟ್ ₹15,000 ಕೋಟಿಗಳಷ್ಟಿದ್ದರೆ, ವಿವಿಧ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ನೀಡಲು ಬೇಕಾಗುವ ಮೊತ್ತ ₹3 ಲಕ್ಷ ಕೋಟಿಗಳಷ್ಟಿದೆ ಎಂದು ಅವರು ಹೇಳಿದ್ದಾರೆ.
ಇದು ₹3 ಲಕ್ಷ ಕೋಟಿಯ ಹಗರಣವಾಗಿದ್ದು, ಕಿಕ್ಬ್ಯಾಕ್ ಹಣವನ್ನು ಚುನಾವಣೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ 68 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜನವರಿ 15ರಂದು ಮತದಾನ ನಡೆಯಲಿದೆ.
ಮತಗಳ್ಳತನದ ಬಳಿಕ ಬಿಜೆಪಿ ಈಗ ಅಭ್ಯರ್ಥಿಗಳನ್ನೇ ಕದಿಯುತ್ತಿದೆ. ಚುನಾವಣಾ ಆಯೋಗಕ್ಕೆ ಧೈರ್ಯವಿದ್ದರೆ, ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವ ಕಡೆ ಮತ್ತೆ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಉದ್ಧವ್ ಒತ್ತಾಯಿಸಿದ್ದಾರೆ.
ಅಭ್ಯರ್ಥಿಗಳ ಅವಿರೋಧ ಆಯ್ಕೆಯು ಮತದಾರರಿಗೆ ಹಕ್ಕು ನಿರಾಕರಿಸಿದಂತೆ. ಅದರಲ್ಲೂ ಝೆನ್–ಜಿ ಮತದಾರರ ಹಕ್ಕು ಕಸಿದಂತೆ ಎಂದಿದ್ದಾರೆ.
ವಿರೋಧ ಪಕ್ಷಗಳ ಅಭ್ಯರ್ಥಿಗಳಿಗೆ ಹಣದ ಆಮಿಷ ಮತ್ತು ಬೆದರಿಕೆವೊಡ್ಡುವ ಮೂಲಕ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ. ಈ ಹಿನ್ನೆಲೆ ವಿರೋಧ ಪಕ್ಷಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ಸಂಜಯ್ ರಾವುತ್ ಸೇರಿದಂತೆ ಶಿವಸೇನಾದ(ಯುಬಿಟಿ) ಹಲವು ನಾಯಕರು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.