ಮುಂಬೈ: ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬೆಂಬಲ ನೀಡುವ ಎಐಎಂಐಎಂ ಪಕ್ಷದ ಪ್ರಸ್ತಾವನೆಯು ಶಿವಸೇನಾ ಪಕ್ಷಕ್ಕೆ ಮಸಿ ಬಳಿಯುವ ಪ್ರತಿಪಕ್ಷ ಬಿಜೆಪಿಯ ಪಿತೂರಿಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಆರೋಪಿಸಿದ್ದಾರೆ.
ಶಿವಸೇನಾ ಪಕ್ಷದ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ವಿಡಿಯೊ ಸಂವಾದದ ಮೂಲಕ ಪಕ್ಷದ ಸಂಸದರು ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಶಿವಸೇನಾ ಪಕ್ಷವು 'ಹಿಂದುತ್ವವಾದಿ' ಪಕ್ಷ ಎಂದು ಪ್ರತಿಪಾದಿಸಿದ ಅವರು, ಹಿಂದುತ್ವ ಮತ್ತಿತ್ತರೆ ವಿಚಾರಗಳ ಕುರಿತಾಗಿ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಎಐಎಂಐಎಂ ಪಕ್ಷದ ಮೈತ್ರಿಯನ್ನು ಯಾರು ಬಯಸಿದ್ದಾರೆ? ಇದು ಬಿಜೆಪಿಯ ಪಿತೂರಿ ಮತ್ತು ಯೋಜನೆಯಾಗಿದೆ. ಎಐಎಂಐಎಂ ಮತ್ತು ಬಿಜೆಪಿ ಮಧ್ಯೆ ಬಹಿರಂಗಪಡಿಸಲಾಗದ ಒಪ್ಪಂದವಿದೆ. ಇದರ ಭಾಗವಾಗಿ ಶಿವಸೇನಾಗೆ ಮಸಿ ಬಳಿಯಲು ಎಐಎಂಐಎಂ ಪಕ್ಷಕ್ಕೆ ಬಿಜೆಪಿ ಆದೇಶಿಸಿದೆ. ತನ್ಮೂಲಕ ಶಿವಸೇನಾದ ಹಿಂದುತ್ವವಾದ ಪ್ರಶ್ನಿಸುವುದು ಅವರ ಉದ್ದೇಶವಾಗಿದೆ. ಇದರ ಪ್ರಕಾರ ಎಐಎಂಐಎಂ ಪಕ್ಷದ ನಾಯಕರು ಅಘಾಡಿ ಸರ್ಕಾರಕ್ಕೆ ಬೆಂಬಲ ನೀಡುವ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಇದಕ್ಕೆ ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಘಾಡಿ ಮೈತ್ರಿ ಸೇರುವ ಮುನ್ನ ಎಐಎಂಐಎಂ ತಾನು ಬಿಜೆಪಿಯ 'ಬಿ' ಅಲ್ಲ. ಸಮಾನ ಮನಸ್ಕ ಪಕ್ಷ ಎಂಬುದನ್ನು ನಿರೂಪಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.