ADVERTISEMENT

ಉಜ್ಜಯಿನಿ ಮಹಾಕಾಳ ದೇಗುಲ ಬೆಂಕಿ ಅವಘಡ: ನೋವುಂಟು ಮಾಡಿದೆ ಎಂದ ಪ್ರಧಾನಿ ಮೋದಿ

ಪಿಟಿಐ
Published 25 ಮಾರ್ಚ್ 2024, 9:19 IST
Last Updated 25 ಮಾರ್ಚ್ 2024, 9:19 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಇಂದೋರ್: ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ನಡೆದ ಬೆಂಕಿ ಅವಘಡ ನೋವುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಾಯಗೊಂಡವರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಉಜ್ಜಯಿನಿಯ ಮಹಾಕಾಳ ದೇಗುಲದಲ್ಲಿ ನಡೆದ ಘಟನೆಯು ನೋವುಂಟು ಮಾಡಿದೆ. ಅವಘಢದಲ್ಲಿ ಗಾಯಗೊಂಡವರ ಶೀಘ್ರ ಚೇತರಿಕೆ ಆಶಿಸುವೆ. ರಾಜ್ಯ ಸರ್ಕಾರದ ಮೇಲುಸ್ತುವಾರಿಯಲ್ಲಿ ಸ್ಥಳೀಯಾಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವುಗಳನ್ನು ನೀಡುವ ಕಾರ್ಯದಲ್ಲಿ ನಿರತವಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಘಟನೆಯಲ್ಲಿ ಗಾಯಗೊಂಡ 14 ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಕರೆ ಮಾಡಿ ಗಾಯಗೊಂಡಿರುವವರ ವಿವರಗಳನ್ನು ಕೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಫೋನ್ ಕರೆ ಮಾಡಿ ವಿಚಾರಿಸಿದ್ದಾರೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.’

ADVERTISEMENT

ಇಂದು ಮುಂಜಾನೆ 5.50ರ ಸುಮಾರಿಗೆ ದೇಗುಲದ ಗರ್ಭಗುಡಿಯಲ್ಲಿ ಬೆಂಕಿ ಅವಘಢ ಸಂಭವಿಸಿ, ಅರ್ಚಕರು ಹಾಗೂ ಸಹಾಯಕರು ಸೇರಿ ಒಟ್ಟು 14 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.