ಮುಂಬೈ:ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದ ಸಚಿವ ಸ್ಥಾನಕ್ಕೆ ಅಬ್ದುಲ್ ಸತ್ತಾರ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ನಿಂದ ಶಿವಸೇನಾ ಸೇರಿದ್ದ ಸತ್ತಾರ್ ಅವರು, ತಮಗೆ ಪ್ರಮುಖ ಖಾತೆಯನ್ನು ನೀಡಿಲ್ಲ ಎಂದು ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಆದರೆ ಔರಂಗಾಬಾದ್ನ ಹಿರಿಯ ನಾಯಕನ ನಿರ್ಧಾರವನ್ನು ಪಕ್ಷ ಇನ್ನೂ ಒಪ್ಪಿಕೊಂಡಿಲ್ಲ. ಸದ್ಯ ನಮಗೆ ಯಾವುದೇ ರಾಜೀನಾಮೆ ಪತ್ರ ಸಿಕ್ಕಿಲ್ಲ ಎಂದು ಶಿವಸೇನಾ ಹಿರಿಯ ನಾಯಕ ಏಕಾಂತ್ ಶಿಂಧೆ ತಿಳಿಸಿದ್ದಾರೆ.
ಪಕ್ಷದ ಸಂಸದ ಸಂಜಯ್ ರಾವುತ್ ಮಾತನಾಡಿ, ರಾಜೀನಾಮೆ ಕುರಿತಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅಬ್ದುಲ್ ಸತ್ತಾರ್ ಅವರೊಂದಿಗೆ ಮಾತನಾಡಲಿದ್ದಾರೆ. ಯಾವಾಗ ಸಚಿವ ಸಂಪುಟ ವಿಸ್ತರಣೆಯಾದರೂ ಕೂಡ ಕೆಲ ನಾಯಕರು ತಮ್ಮಿಷ್ಟದ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಳ್ಳುತ್ತಾರೆ. ಆದರೆ ಈ ಸರ್ಕಾರವು ಮಹಾ ವಿಕಾಸ್ ಆಘಾಡಿ ಮತ್ತು ಶಿವಸೇನಾ ಸರ್ಕಾರ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದರು.
ಸತ್ತಾರ್ ಅವರು ಬೇರೆ ಪಕ್ಷದಿಂದ ಪಕ್ಷಕ್ಕೆ ಬಂದಿದ್ದರೂ ಕೂಡ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ ಬಳಿಕ ಸತ್ತಾರ್ ಅವರ ಅಸಮಾಧಾನ ಶಮನವಾಗಲಿದೆ ಎಂದು ಹೇಳಿದರು.
ಮಾಜಿ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತಾರ್, ಡಿಸೆಂಬರ್ 30, ಸೋಮವಾರದಂದು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ಬೆಳವಣಿಗೆ ಕುರಿತು ಸತ್ತಾರ್ ಅವರ ಪುತ್ರ ಸಮೀರ್ ಸತ್ತಾರ್ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಈ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ರಾಜೀನಾಮೆ ಕುರಿತು ಅವರೇ ಮಾತನಾಡಬೇಕು ಮತ್ತು ಅವರೇ ಈ ಬಗ್ಗೆ ಶೀಘ್ರವೇ ಮಾತನಾಡಲಿದ್ದಾರೆ. ಈ ಬಗ್ಗೆ ಕಾದು ನೋಡುವುದೇ ಸೂಕ್ತ ಎಂದು ಸುದ್ದಿಸಂಸ್ಥೆ ಎಎನ್ಐನೊಂದಿಗೆ ಮಾತನಾಡಿದ್ದಾರೆ.
ಇದಕ್ಕೂ ಮುನ್ನ ಹಲವು ಹಲವಾರು ಕಾಂಗ್ರೆಸ್ ನಾಯಕರು ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನಗಳನ್ನು ನೀಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.