ADVERTISEMENT

ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ: ಸಮಗ್ರ ತನಿಖೆಗೆ ಅಠವಳೆ ಆಗ್ರಹ

ಪಿಟಿಐ
Published 15 ಫೆಬ್ರುವರಿ 2023, 15:32 IST
Last Updated 15 ಫೆಬ್ರುವರಿ 2023, 15:32 IST
ರಾಮದಾಸ್‌ ಅಠವಳೆ
ರಾಮದಾಸ್‌ ಅಠವಳೆ   

ಮುಂಬೈ: ಕೇಂದ್ರ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮದಾಸ್‌ ಅಠವಳೆ ಅವರು ಬುಧವಾರ ಬಾಂಬೆ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ ಬಾಂಬೆ) ಭೇಟಿ ನೀಡಿ, ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಪರಿಶಿಷ್ಟ ವಿದ್ಯಾರ್ಥಿಯ ಸಾವಿನ ಕುರಿತು ಹಾಗೂ ಆತ ಜಾತಿ ತಾರತಮ್ಯ ಎದುರಿಸುತ್ತಿದ್ದ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.‌

ದರ್ಶನ್‌ ಸೋಲಂಕಿ (18) ಎಂಬುವವರು ಭಾನುವಾರ ಪೂವೈ ಕ್ಯಾಂಪಸ್‌ ಹಾಸ್ಟೆಲ್‌ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅಠವಳೆ, ‘ದರ್ಶನ್‌ ಅವರು ಜಾತಿ ತಾರತಮ್ಯ ಎದರಿಸುತ್ತಿದ್ದರು ಎಂಬ ಆರೋಪಗಳಿವೆ. ಈ ಆಯಾಮದಲ್ಲೂ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಾನು ಕೇಳಿಕೊಂಡಿದ್ದೇನೆ’ ಎಂದರು.

ADVERTISEMENT

ಅಹಮದಾಬಾದ್‌ ನಿವಾಸಿಯಾಗಿದ್ದ ದರ್ಶನ್‌ ಅವರು ಪ್ರಥಮ ವರ್ಷದ ಬಿ.ಟೆಕ್‌ (ಕೆಮಿಕಲ್‌) ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರದ ಈ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ್ದ ಬಾಂಬೆ ಐಐಟಿ, ಜಾತಿ ತಾರತಮ್ಯದ ಆರೋಪವನ್ನು ತಿರಸ್ಕರಿಸಿತ್ತು. ಅಲ್ಲದೇ, ದರ್ಶನ್‌ ಅವರ ಸ್ನೇಹಿತರಿಂದ ಮಾಹಿತಿ ಪಡೆದಿದ್ದು, ಅವರ ಹೇಳಿಕೆಯು ಯಾವುದೇ ತಾರತಮ್ಯವಿಲ್ಲ ಎಂದು ಸೂಚಿಸಿದೆ ಎಂದೂ ಐಐಟಿ ಹೇಳಿತ್ತು. ಆದ್ದರಿಂದ, ಆಂತರಿಕ ಹಾಗೂ ಪೊಲೀಸ್‌ ತನಿಖೆಗೆ ಕಾಯುವಂತೆ ಐಐಟಿ ವಿದ್ಯಾರ್ಥಿಗಳಿಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.