ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಶಾಂತಿಯುತವಾಗಿ ಬಗೆಹರಿಸುವ ನಂಬಿಕೆಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ತಿಳಿಸಿದ್ದಾರೆ.
'ನಾನು ಯಾವಾಗಲೂ ಶಾಂತಿಯುತ ಪರಿಹಾರದಲ್ಲೇ ನಂಬಿಕೆಯನ್ನಿಟ್ಟಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಏನನ್ನ ಘೋಷಿಸಿದರೋ ಅದು ಬಹಳ ಮುಖ್ಯ' ಎಂದು ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸುವ ಕೇಂದ್ರದ ಪ್ರಸ್ತಾಪವನ್ನು ಬೆಂಬಲಿಸಿ ಹೇಳಿದರು.
ಮುಂದಿನ 18 ತಿಂಗಳು ಮೂರು ಕೃಷಿ ಕಾನೂನುಗಳನ್ನು ಅಮಾನತುಗೊಳಿಸುವ ಸರ್ಕಾರದ ಪ್ರಸ್ತಾವನೆಯು ಇನ್ನೂ ರೈತರ ಮುಂದಿದೆ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದರು. ಕೃಷಿ ಕಾನೂನುಗಳ ಬಗ್ಗೆ ಸರ್ಕಾರದ ನಿಲುವಿನ ಬಗ್ಗೆ ಎಲ್ಲಾ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡುತ್ತಿರುವಾಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.
ನರೇಂದ್ರ ಸಿಂಗ್ ತೋಮರ್ ಅವರು ಏನು ಹೇಳಿದರೋ ಅದನ್ನೇ ಪುನರುಚ್ಚರಿಸಲು ನಾನು ಬಯಸುತ್ತೇನೆ. ನಾವು ಒಮ್ಮತಕ್ಕೆ ಬರಲಾಗುತ್ತಿಲ್ಲ, ಆದರೆ ನಾವು ನಿಮ್ಮ ಮುಂದೆ ಸರ್ಕಾರದ ಪ್ರಸ್ತಾಪವನ್ನು ಇಡುತ್ತಿದ್ದೇವೆಮತ್ತು ನೀವು (ರೈತರು)ಆ ಬಗ್ಗೆ ತೀರ್ಮಾನಿಸಬಹುದು. ಸರ್ಕಾರದ ಪ್ರಸ್ತಾಪ ಇನ್ನೂ ಇದೆ. ದಯವಿಟ್ಟು ಇದನ್ನು ನಿಮ್ಮ ಅನುಯಾಯಿಗಳಿಗೆ ತಿಳಿಸಿ. ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕು. ನಾವೆಲ್ಲರೂ ರಾಷ್ಟ್ರದ ಬಗ್ಗೆ ಯೋಚಿಸಬೇಕು' ಎಂದು ಸರ್ವಪಕ್ಷ ಸಭೆಯಲ್ಲಿ ಪಿಎಂ ಮೋದಿ ಹೇಳಿದರು.
ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26ರಿಂದ ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.