ADVERTISEMENT

ಕರ್ನಾಟಕದ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 8:13 IST
Last Updated 6 ಜುಲೈ 2021, 8:13 IST
ತಾವರ್‌ಚಂದ್‌ ಗೆಹ್ಲೋಟ್‌- ಚಿತ್ರ ಕೃಪೆ: ಟ್ವಿಟರ್‌
ತಾವರ್‌ಚಂದ್‌ ಗೆಹ್ಲೋಟ್‌- ಚಿತ್ರ ಕೃಪೆ: ಟ್ವಿಟರ್‌   

ನವದೆಹಲಿ: ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್‌ ಗೆಹ್ಲೋಟ್‌ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ.

ಹಾಲಿ ರಾಜ್ಯಪಾಲ ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡಿದೆ. ಅವರ ಸ್ಥಾನಕ್ಕೆ ತಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟದ ಪುನರ್‌ರಚನೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ನೇಮಕಾತಿ ಆದೇಶ ಹೊರಬಂದಿದೆ.

ರಾಜ್ಯಸಭೆಯ ಬಿಜೆಪಿ ನಾಯಕರಾಗಿರುವ ಗೆಹ್ಲೋಟ್, ಮಧ್ಯಪ್ರದೇಶದ ನಾಗ್ಡಾದವರು. ಸದ್ಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿದ್ದಾರೆ. ಮೂರು ಬಾರಿ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಗೆಹ್ಲೋಟ್‌, ಈಗ ರಾಜ್ಯಸಭೆಯ ಸದಸ್ಯರು.

ADVERTISEMENT

ಕರ್ನಾಟಕ ಒಳಗೊಂಡಂತೆ ಒಟ್ಟು ಎಂಟು ರಾಜ್ಯಗಳ ರಾಜ್ಯಪಾಲರ ನೇಮಕ ಮಾಡಲಾಗಿದೆ.

ಮಿಜೋರಾಂ ರಾಜ್ಯಪಾಲರಾಗಿರುವ ಎಸ್.ಪಿ. ಶ್ರೀಧರನ್ ಪಿಳ್ಳೈ ಅವರನ್ನು ಗೋವಾಗೆ, ಹರಿಯಾಣದ ರಾಜ್ಯಪಾಲ ಸತ್ಯದೇವ ನಾರಾಯಣ ಅವರನ್ನು ತ್ರಿಪುರಾಗೆ, ತ್ರಿಪುರಾ ರಾಜ್ಯಪಾಲ ರಮೇಶ‌ ಬೈಸ್ ಅವರನ್ನು ಜಾರ್ಖಂಡ್‌ಗೆ, ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಹರಿಯಾಣಕ್ಕೆ, ಕೆ.ಹರಿಬಾಬು ಅವರನ್ನು ಮಿಜೋರಾಂಗೆ, ಮಂಗುಭಾಯಿ ಛಗನ್‌ಭಾಯಿ ಪಟೇಲ್ ಅವರನ್ನು ಮಧ್ಯಪ್ರದೇಶಕ್ಕೆ, ರಾಜೇಂದ್ರ ವಿಶ್ವನಾಥ ಅರಳೇಕರ್ ಅವರನ್ನು ಹಿಮಾಚಲ ಪ್ರದೇಶಕ್ಕೆ ರಾಜ್ಯಪಾಲರಾಗಿ ನೇಮಕಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.