ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್
(ಸಂಗ್ರಹ ಚಿತ್ರ)
ಲಖನೌ: ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಕಾನೂನುಬಾಹಿರ ಮತಾಂತರ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗಿದ್ದು, ಇಂದು (ಮಂಗಳವಾರ) ಅಂಗೀಕಾರವಾಗುವ ಸಾಧ್ಯತೆ ಇದೆ.
ಈ ತಿದ್ದುಪಡಿ ಮಸೂದೆಯಡಿ ಒಬ್ಬ ವ್ಯಕ್ತಿಯನ್ನು ಬೆದರಿಕೆ ಹಾಕಿ ಮತಾಂತರ ಮಾಡಿದರೆ, ಮದುವೆಯಾಗುವುದಾಗಿ ಭರವಸೆ ನೀಡಿ ಸಂಚು ಮಾಡಿದರೆ, ಅಪ್ರಾಪ್ತರನ್ನು ಅಥವಾ ಮಹಿಳೆಯರನ್ನು ನಂಬಿಸಿ ಮಾನವ ಕಳ್ಳ ಸಾಗಣೆಗೆ ಮಾಡುವ ವ್ಯಕ್ತಿಗಳ ವಿರುದ್ಧ ಗಂಭೀರ ಪ್ರಕರಣಗಳೆಂದು ಪರಿಗಣಿಸಲಾಗುವುದು.
ಮತಾಂತರ ತಿದ್ದುಪಡಿ ಕಾಯ್ದೆಯಡಿ ನಿಯಮ ಉಲ್ಲಂಘಿಸಿದರೆ 20 ವರ್ಷಗಳ ಜೈಲು ಅಥವಾ ಜೀವಾವಧಿ ಶಿಕ್ಷೆ ಮತ್ತು ₹5 ಲಕ್ಷ ದಂಡವನ್ನು ವಿಧಿಸಲಾಗುತ್ತದೆ. ಈ ಹಿಂದಿನ ಕಾಯ್ದೆ ಪ್ರಕಾರ, 10 ವರ್ಷ ಜೈಲು, 50 ಸಾವಿರ ದಂಡ ವಿಧಿಸಲಾಗುತ್ತಿತ್ತು.
ಯಾವುದೇ ವ್ಯಕ್ತಿಯು ಕಾನೂನುಬಾಹಿರ ಮತಾಂತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಬಹುದು. ಈ ಹಿಂದೆ ಪ್ರಕರಣ ಸಂಬಂಧ ದೂರು ದಾಖಲಿಸಲು ಸಂತ್ರಸ್ತೆಯ ಜತೆಗೆ ಪೋಷಕರು, ಒಡಹುಟ್ಟಿದವರ ಉಪಸ್ಥಿತಿ ಅಗತ್ಯವಾಗಿತ್ತು.
ಅಂತಹ ಪ್ರಕರಣಗಳನ್ನು ಸೆಷನ್ಸ್ ನ್ಯಾಯಾಲಯದ ಕೆಳಗಿನ ಯಾವುದೇ ನ್ಯಾಯಾಲಯವು ವಿಚಾರಣೆ ನಡೆಸುವುದಿಲ್ಲ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಅವಕಾಶ ನೀಡದೆ ಜಾಮೀನು ಅರ್ಜಿಯನ್ನು ಪರಿಗಣಿಸುವುದಿಲ್ಲ. ಈ ಪ್ರಕರಣದಡಿ ಬರುವ ಎಲ್ಲಾ ಅಪರಾಧಗಳನ್ನು ಜಾಮೀನು ರಹಿತವಾಗಿದೆ ಎಂದು ಪ್ರಸ್ತಾಪಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಅವರು ಸೋಮವಾರ (ಜುಲೈ29) ಸದನದಲ್ಲಿ ಮಸೂದೆಯನ್ನು ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.