ADVERTISEMENT

ಮತಾಂತರ ನಿಷೇಧ ಕಾಯ್ದೆ: ಕರ್ನಾಟಕದ ವ್ಯಕ್ತಿಯ ಮೇಲಿನ ಪ್ರಕರಣ ಕೈಬಿಟ್ಟ ಪೊಲೀಸರು

ಪಿಟಿಐ
Published 21 ಜನವರಿ 2021, 12:10 IST
Last Updated 21 ಜನವರಿ 2021, 12:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗೋರಖ್‌ಪುರ, ಉತ್ತರ ಪ್ರದೇಶ: ಕರ್ನಾಟಕದ ಮೆಹಬೂಬ್‌ ಎಂಬವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶದ ಪೊಲೀಸರು ಕೈಬಿಟ್ಟಿದ್ದಾರೆ.

‘19 ವರ್ಷದ ಯುವತಿ ಮೇಲೆ ಅತ್ಯಾಚಾರ ಹಾಗೂ ವಂಚನೆ ಎಸಗಿದ ಆರೋಪದಡಿ ಮೆಹಬೂಬ್‌ರನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ‌

ಪೊಲೀಸರ ತಂಡವು ಮೆಹಬೂಬ್‌ ಮತ್ತು ಜೊತೆಗಿದ್ದ ಯುವತಿಯನ್ನು ಕರ್ನಾಟಕದಿಂದ ಗೋರಖ್‌ಪುರಕ್ಕೆ ಒಯ್ದಿತ್ತು. ಮೆಹಬೂಬ್‌ ಯುವತಿ ಜೊತೆಗೆ ವಿವಾಹ ಆಗಿರಲಿಲ್ಲ. ಹೀಗಾಗಿ ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲಾಗಿದೆ’ ಎಂದು ಚಿಲುವಟಲ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನೀರಜ್‌ ರಾಯ್‌ ಮಾಹಿತಿ ನೀಡಿದ್ದಾರೆ.

ADVERTISEMENT

‘ತಾನು ನೌಕಾಪಡೆಯ ಅಧಿಕಾರಿ ಎಂದು ಯುವತಿಗೆ ತಿಳಿಸಿದ್ದ ಮೆಹಬೂಬ್‌, ಕರ್ನಾಟಕಕ್ಕೆ ಬಂದರೆ ಒಳ್ಳೆಯ ಕೆಲಸ ಕೊಡಿಸುವುದಾಗಿ ಯುವತಿಗೆ ಆಮಿಷವೊಡ್ಡದ್ದ. ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಿವೃತ್ತ ಸೈನಿಕರಾಗಿರುವ ಯುವತಿಯ ತಂದೆ, ಮಗಳು ಕಾಣೆಯಾಗಿರುವ ಕುರಿತು ಜನವರಿ 5ರಂದು ದೂರು ದಾಖಲಿಸಿದ್ದರು. ಆಕೆ ಮೆಹಬೂಬ್‌ ಜೊತೆ ಸಂಪರ್ಕದಲ್ಲಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಯುವತಿಯ ತಂದೆ ನೀಡಿದ್ದ ದೂರಿನ ಅನ್ವಯ ಮೆಹಬೂಬ್‌ ವಿರುದ್ಧ ಇದೇ 11ರಂದು ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಯುವತಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.