ADVERTISEMENT

ಉತ್ತರಪ್ರದೇಶ: ಹೊಸ ಪಕ್ಷ ಘೋಷಿಸಿದ ಎಸ್‌ಬಿಎಸ್‌ಪಿ ಬಂಡಾಯ ನಾಯಕರು

ಪಿಟಿಐ
Published 27 ಸೆಪ್ಟೆಂಬರ್ 2022, 14:17 IST
Last Updated 27 ಸೆಪ್ಟೆಂಬರ್ 2022, 14:17 IST
ಎಸ್‌ಬಿಎಸ್‌ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್
ಎಸ್‌ಬಿಎಸ್‌ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್   

ಮೌ (ಉತ್ತರ ಪ್ರದೇಶ): ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಬಂಡಾಯ ನಾಯಕರು ಮಂಗಳವಾರ ಇಲ್ಲಿ ಹೊಸ ಪಕ್ಷವನ್ನು ಘೋಷಿಸಿದರು. ಮಹೇಂದ್ರ ರಾಜ್‌ಭರ್ ಅವರನ್ನು ಪಕ್ಷದ ಮೊದಲ ಅಧ್ಯಕ್ಷರಾಗಿಯೂ ಆಯ್ಕೆ ಮಾಡಲಾಗಿದೆ.

ಘಾಜಿಪುರ ಟ್ರಿಸೆಕ್ಷನ್‌ನಲ್ಲಿರುವ ಪ್ಲಾಜಾದಲ್ಲಿ 'ಮಹಾಪಂಚಾಯತ್' ಆಯೋಜಿಸಲು ಅನುಮತಿ ನಿರಾಕರಿಸಿದ ನಂತರ ಮಹೇಂದ್ರ ಅವರ ಬೆಂಬಲಿಗರು ಎಸ್‌ಬಿಎಸ್‌ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ವಿರುದ್ಧ ಘೋಷಣೆ ಕೂಗಿದರು. ಈ ನಡುವೆಯೇ ಮಹೇಂದ್ರ ರಾಜ್‌ಭರ್ ಅವರು ಜಿಲ್ಲಾಧಿಕಾರಿ ಕಚೇರಿಯ ಹೊರಗೆ 'ಸುಹೇಲ್‌ದೇವ್ ಸ್ವಾಭಿಮಾನ್ ಪಾರ್ಟಿ' ರಚನೆಯನ್ನು ಘೋಷಿಸಿದರು.

ಮಹೇಂದ್ರ ರಾಜ್‌ಭರ್ ಅವರ ಬೆಂಬಲಿಗರು ಬೆಳಿಗ್ಗೆ ಮಹಾಪಂಚಾಯತ್ ನಡೆಯುವ ಸ್ಥಳಕ್ಕೆ ತಲುಪಿದಾಗ ಕಟ್ಟಡಕ್ಕೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ನಂತರ ಅವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದು, ಅಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಈ ಸಂದರ್ಭ ಮಹೇಂದ್ರ ರಾಜ್‌ಭರ್ ರಸ್ತೆಯಲ್ಲೇ ಹೊಸ ಪಕ್ಷವನ್ನು ಘೋಷಿಸಿದರು.

ADVERTISEMENT

ಈ ಕುರಿತಂತೆ ಪ್ತತಿಕ್ರಿಯಿಸಿರುವ ಮಹೇಂದ್ರ ರಾಜ್‌ಭರ್, ಮೌ ಜಿಲ್ಲಾಡಳಿತವು ತಮಗೆ ಮಹಾಪಂಚಾಯತ್ ನಡೆಸಲು ಅವಕಾಶ ನೀಡಲಿಲ್ಲ. ಅದಕ್ಕೆ ಓ ಪಿ ರಾಜ್‌ಭರ್ ಕಾರಣ ಎಂದು ಆರೋಪಿಸಿದರು.

ಎಸ್‌ಬಿಎಸ್‌ಪಿ ಬಂಡಾಯ ನಾಯಕರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಜಿಲ್ಲಾಡಳಿತವು ಕಟ್ಟೆಚ್ಚರ ವಹಿಸಿತ್ತು.

ಓ ಪಿ ರಾಜ್‌ಭರ್ ಅವರು ಪಕ್ಷದ ಮೂಲ ತತ್ವಗಳಿಂದ ವಿಮುಖರಾಗಿದ್ದಾರೆ ಮತ್ತು ಅವರು ತಮ್ಮ ಇಬ್ಬರು ಪುತ್ರರ ಮಾತನ್ನು ಮಾತ್ರ ಕೇಳುತ್ತಾರೆಯೇ ಹೊರತು ಕಾರ್ಯಕರ್ತರ ಮಾತನ್ನಲ್ಲ ಎಂದು ಬಂಡಾಯ ನಾಯಕರು ಮಂಗಳವಾರ ಆರೋಪಿಸಿದ್ದಾರೆ.

ಓ ಪಿ ರಾಜ್‌ಭರ್ ಅವರು ಪಕ್ಷದ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬಂಡಾಯ ನಾಯಕರಲ್ಲಿ ಒಬ್ಬರಾದ ಚಂದ್ರಶೇಖರ್ ರಾಜ್‌ಭರ್ ಆರೋಪಿಸಿದರು. ಈಗ ನಾವು ಮಹೇಂದ್ರ ರಾಜ್‌ಭರ್ ಅವರ ನೇತೃತ್ವದಲ್ಲಿ 'ಸುಹೇಲ್‌ದೇವ್ ಸ್ವಾಭಿಮಾನ್ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.