ಅಮೆರಿಕ ಭಾರತ ಧ್ವಜ
ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಸಂಚು ಕುರಿತು ಭಾರತ ಕೈಗೊಂಡಿರುವ ತನಿಖೆಯಿಂದ ‘ಸ್ಪಷ್ಟವಾದ ಉತ್ತರದಾಯಿತ್ವ’ ನಿಗದಿಯಾಗುವಂತಾಗಬೇಕು ಎಂದು ಅಮೆರಿಕ ಹೇಳಿದೆ.
ಈ ಸಂಚಿನ ಕುರಿತು ತನಿಖೆ ನಡೆಸಲು ಭಾರತ ರಚಿಸಿರುವ ತನಿಖಾ ಸಮಿತಿಯೊಂದಿಗೆ ಕಳೆದ ವಾರ ವಾಷಿಂಗ್ಟನ್ನಲ್ಲಿ ನಡೆದ ಸಭೆಯಲ್ಲಿ ಅಮೆರಿಕ ಅಧಿಕಾರಿಗಳು ಈ ಮಾತು ಹೇಳಿದ್ದಾರೆ.
‘ತನಿಖೆಗೆ ಸಂಬಂಧಿಸಿ, ಎರಡೂ ದೇಶಗಳು ತಮ್ಮಲ್ಲಿನ ಮಾಹಿತಿಗಳನ್ನು ಈ ಸಭೆಯಲ್ಲಿ ವಿನಿಮಯ ಮಾಡಿಕೊಂಡಿವೆ’ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
‘ಭಾರತದ ಸಮಿತಿಯೊಂದಿಗೆ ಕಳೆದ ವಾರ ನಡೆದ ಮಾತುಕತೆ ಆಧಾರದಲ್ಲಿ ಈ ಪ್ರಕರಣದ ತನಿಖೆ ಮುಂದುವರಿಯಲಿದೆ ಎಂಬುದು ನಮ್ಮ ನಿರೀಕ್ಷೆ. ತನಿಖೆ ಪೂರ್ಣಗೊಂಡು ಹೊಣೆಗಾರಿಕೆ ನಿಗದಿಯಾದಾಗ ಮಾತ್ರ ಅಮೆರಿಕ ಈ ವಿಚಾರವಾಗಿ ತೃಪ್ತಿ ವ್ಯಕ್ತಪಡಿಸಲಿದೆ’ ಎಂದು ಪಟೇಲ್ ಹೇಳಿದ್ದಾರೆ.
ಇನ್ನೊಂದೆಡೆ, ‘ಪನ್ನು ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಅಮೆರಿಕ ಅರೋಪ ಹೊರಿಸಿರುವ ವಿಕಾಸ್ ಯಾದವ್ ಭಾರತ ಸರ್ಕಾರ ನೌಕರನಲ್ಲ ಎಂಬುದನ್ನು ಅಮೆರಿಕಕ್ಕೆ ತಿಳಿಸಲಾಗಿದೆ’ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.