ಸುಪ್ರೀಂ ಕೋರ್ಟ್
ನವದೆಹಲಿ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ‘ಹೆದ್ದಾರಿಯಲ್ಲಿ ಯಾವುದೇ ಮುನ್ಸೂಚನೆ ಕೊಡದೇ ದಿಢೀರ್ ಬ್ರೇಕ್ ಹಾಕಿದರೆ ಅದು ಕಾರು ಚಾಲಕನ ನಿರ್ಲಕ್ಷ್ಯತನ’ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ ಕುಮಾರ್ ಅವರು ಇದ್ದ ಪೀಠವು ತಮಿಳುನಾಡಿನ ಕೊಯಮತ್ತೂರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ.
‘ಹೆದ್ದಾರಿಗಳಲ್ಲಿ ಅತಿ ವೇಗ ನಿರೀಕ್ಷಿತ. ಚಾಲಕ ವಾಹನವನ್ನು ನಿಲ್ಲಿಸುವಾಗ ಹಿಂಬದಿಯ ವಾಹನಗಳಿಗೆ ಮುನ್ಸೂಚನೆ ನೀಡಬೇಕಾದುದು ಅವನ ಹೊಣೆಗಾರಿಕೆ ಆಗಿರುತ್ತದೆ’ ಎಂದು ಹೇಳಿದೆ.
ಗರ್ಭಿಣಿಯಾಗಿದ್ದ ತನ್ನ ಪತ್ನಿಗೆ ವಾಂತಿ ಮಾಡಬೇಕು ಎನಿಸಿದ್ದ ಕಾರಣಕ್ಕೆ ದಿಢೀರ್ ಬ್ರೇಕ್ ಹಾಕಿದ್ದಾಗಿ ರಸ್ತೆ ಅಪಘಾತಕ್ಕೆ ಕಾರಣವಾಗಿದ್ದ ಕಾರು ಚಾಲಕ ವಿವರಣೆ ನೀಡಿದ್ದರು. ಇದನ್ನು ಒಪ್ಪದ ನ್ಯಾಯಮೂರ್ತಿ ಧುಲಿಯಾ ನೇತೃತ್ವದ ಪೀಠವು ಕಾರು ಚಾಲಕ ಶೇ 50ರಷ್ಟು ಬಾಧ್ಯಸ್ಥ ಎಂದು ಮಂಗಳವಾರ ತೀರ್ಪು ನೀಡಿದೆ.
2017ರಲ್ಲಿ ರಸ್ತೆ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಮಹಮ್ಮದ್ ಹಕಿಮ್ ಪರಿಹಾರ ಹೆಚ್ಚಳ ಕೋರಿ ಕೋರ್ಟ್ ಮೊರೆಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.