ಸಾವು
(ಪ್ರಾತಿನಿಧಿಕ ಚಿತ್ರ)
ಬಿಜ್ನೋರ್ (ಉತ್ತರ ಪ್ರದೇಶ): ಮನೆಯವರ ಬಳಿ ಹಣ ಕೇಳಲು ನಿರಾಕರಿಸಿದ್ದಕ್ಕಾಗಿ ಬಾಲಕನೊಬ್ಬನನ್ನು ಆತನ ಸ್ನೇಹಿತರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಸೇನ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೀಪಕ್ ಎಂಬುವರ 12 ವರ್ಷದ ಮಗ ಆಯುಷ್ ಮೇ 6ರ (ಮಂಗಳವಾರ) ಸಂಜೆ ಮನೆಯಿಂದ ಹೊರಗೆ ಹೋಗಿದ್ದವನು ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯುಷ್ ಪೋಷಕರು ದೂರು ನೀಡಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಝಾ ತಿಳಿಸಿದ್ದಾರೆ.
ಆದೇ ದಿನ ದೀಪಕ್ ಅವರ ಸಂಬಂಧಿಕರೊಬ್ಬರಿಗೆ ಇನ್ಸ್ಟಾಗ್ರಾಮ್ನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟು ಸಂದೇಶವನ್ನು ಕಳುಹಿಸಲಾಗಿತ್ತು. ಇನ್ಸ್ಟಾಗ್ರಾಮ್ ಐಡಿ ಆಧರಿಸಿ ತನಿಖೆ ನಡೆಸಿದ ಪೊಲೀಸರು, ಅದೇ ಗ್ರಾಮದ ಐವರು ಆರೋಪಿಗಳಾದ ಅನಿಕೇತ್, ಅನ್ಮೋಲ್, ಆಕಾಶ್, ನಕುಲ್ ಮತ್ತು ಉಮೇಶ್ನನ್ನು ಬಂಧಿಸಿದ್ದಾರೆ. ಎಲ್ಲರೂ ಅಪ್ರಾಪ್ತ ವಯಸ್ಕರು ಎಂದು ಅಭಿಷೇಕ್ ವಿವರಿಸಿದ್ದಾರೆ.
ಕಾಡಿನಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಅನಿಕೇತ್ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಪೊಲೀಸರು ಅನಿಕೇತ್ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಅಭಿಷೇಕ್ ತಿಳಿಸಿದ್ದಾರೆ.
ಮನೆಯವರ ಬಳಿ ಹಣ ಕೇಳುವಂತೆ ಆಯುಷ್ಗೆ ಅನಿಕೇತ್ ಒತ್ತಾಯಿಸಿದ್ದ. ಆದರೆ, ಹಣ ಕೇಳಲು ಆಯುಷ್ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಅನಿಕೇತ್, ಸ್ನೇಹಿತರೊಂದಿಗೆ ಸೇರಿ ಆತನನ್ನು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಹೂಳಲು ಯೋಜನೆ ರೂಪಿಸಿದ್ದ ಎಂದು ಅವರು ಹೇಳಿದ್ದಾರೆ.
ಅನಿಕೇತ್, ಆಯುಷ್ನ ಆಪ್ತ ಸ್ನೇಹಿತನಾಗಿದ್ದು, ಮತ್ತೊಬ್ಬ ಆರೋಪಿ ಆತನ ಸಂಬಂಧಿಯಾಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.