ADVERTISEMENT

ಉತ್ತರ ಪ್ರದೇಶದ ಕಾರ್ಮಿಕರನ್ನು ಕರೆದೊಯ್ಯಲು ಇನ್ನು ಅನುಮತಿ ಅಗತ್ಯ: ಆದಿತ್ಯನಾಥ

ಬೇರೆ ರಾಜ್ಯಗಳನ್ನು ಉದ್ದೇಶಿಸಿ ಹೇಳಿಕೆ

ಪಿಟಿಐ
Published 25 ಮೇ 2020, 6:38 IST
Last Updated 25 ಮೇ 2020, 6:38 IST
ಯೋಗಿ ಆದಿತ್ಯನಾಥ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ (ಸಂಗ್ರಹ ಚಿತ್ರ)   

ಲಖನೌ: ಇನ್ನು ಮುಂದೆ ಯಾವುದೇ ರಾಜ್ಯದವರು ಉತ್ತರ ಪ್ರದೇಶದಿಂದ ವಲಸೆ ಕಾರ್ಮಿಕರನ್ನು ಕರೆದೊಯ್ಯಬೇಕಿದ್ದರೆ ಸರ್ಕಾರದ ಅನುಮತಿ ಅಗತ್ಯ. ಅವರ ಸಾಮಾಜಿಕ, ಕಾನೂನು ರೀತ್ಯಾ ಮತ್ತು ವಿತ್ತೀಯ ಹಕ್ಕುಗಳನ್ನು ನಾವು ಖಾತರಿಪಡಿಸಬೇಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ವೇಳೆ ಸಂಕಷ್ಟದಲ್ಲಿರುವ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರನ್ನು ವಿವಿಧ ರಾಜ್ಯಗಳು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಯೋಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಲಸೆ ಕಾರ್ಮಿಕರು ನಮ್ಮ ಅತಿ ದೊಡ್ಡ ಸಂಪನ್ಮೂಲ. ಇವರಿಗೆ ನಾವು ಉದ್ಯೋಗ ಒದಗಿಸಿಕೊಡುತ್ತೇವೆ. ಅದಕ್ಕಾಗಿ ಆಯೋಗವೊಂದನ್ನು ರಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಅವರು ನಮ್ಮವರು. ಬೇರೆ ರಾಜ್ಯದವರು ಅವರನ್ನು ಮತ್ತೆ ಕರೆದೊಯ್ಯಬೇಕಾದರೆ ಉತ್ತರ ಪ್ರದೇಶ ಸರ್ಕಾರದ ಅನುಮತಿ ಕೋರಬೇಕು’ ಎಂದು ಆರ್‌ಎಸ್‌ಎಸ್‌ನ ನಿಯತಕಾಲಿಕೆ ‘ಪಾಂಚಜನ್ಯ’ ಮತ್ತು ‘ಆರ್ಗನೈಸರ್’ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡುವ ವೇಳೆ ಯೋಗಿ ಹೇಳಿದ್ದಾರೆ.

ಉತ್ತರ ಪ್ರದೇಶಕ್ಕೆ ವಾಪಸಾಗಿರುವ ವಲಸೆ ಕಾರ್ಮಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅವರ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

‘ಎಲ್ಲ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಳ್ಳಲಾಗುತ್ತಿದೆ. ಅವರ ಕೌಶಲ ಏನೆಂಬುದನ್ನೂ ದಾಖಲು ಮಾಡಿಕೊಳ್ಳಲಾಗುತ್ತಿದೆ. ಅವರನ್ನು ಕೆಲಸಕ್ಕೆ ಕರೆದೊಯ್ಯಲು ಬಯಸುವ ರಾಜ್ಯಗಳು ಅವರ ಸಾಮಾಜಿಕ, ಕಾನೂನು ರೀತ್ಯಾ ಮತ್ತು ಆರ್ಥಿಕ ಭದ್ರತೆಯನ್ನು ಖಾತರಿಪಡಿಸಬೇಕು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.