ADVERTISEMENT

ಉತ್ತರ ಪ್ರದೇಶ: ವಿಮೆ ಹಣಕ್ಕಾಗಿ ಪತಿಯೊಂದಿಗೆ ಸೇರಿ ತಾಯಿಯನ್ನೇ ಕೊಂದ ಮಗಳು!

ಪಿಟಿಐ
Published 15 ಏಪ್ರಿಲ್ 2022, 13:27 IST
Last Updated 15 ಏಪ್ರಿಲ್ 2022, 13:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದ ಮನೆಯೊಂದರಲ್ಲಿ 55 ವರ್ಷ ವಯಸ್ಸಿನ ಮಹಿಳೆಯ ಶವ ಬಹುತೇಕ ಸುಟ್ಟ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮೃತ ಮಹಿಳೆಯ ಮಗಳು ಮತ್ತು ಅಳಿಯನ ಪಾತ್ರ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತಂದೆಯ ನಿಧನದ ನಂತರ ತಾಯಿಗೆ ₹ 15 ಲಕ್ಷ ವಿಮೆ ಹಣ ಲಭಿಸಿತ್ತು. ಆ ಹಣಕ್ಕಾಗಿ ಅಕ್ಕ ಮತ್ತು ಭಾವ ತಾಯಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತ ಮಹಿಳೆಯ ಮಗ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯ ಮಗ ವಿಪಿನ್‌, ಆರೋಪಿಗಳಾದ ತನ್ನ ಸಹೋದರಿ ಮೀನು ಮತ್ತು ಆಕೆಯ ಪತಿ ಮಹಾವೀರ್‌ ವಿರುದ್ಧ ದೂರು ದಾಖಲಿಸಿದ್ದಾರೆ.

ADVERTISEMENT

ಈ ಸಂಬಂಧ ಮಾಹಿತಿ ನೀಡಿರುವಗ್ರೇಟರ್‌ ನೋಯ್ಡಾದ ಹೆಚ್ಚುವರಿ ಪೊಲೀಸ್‌ ಉಪ ಕಮಿಷನರ್‌ ವಿಶಾಲ್ ಪಾಂಡೆ,'ದನಕೌರ್‌ ಪಟ್ಟಣದಲ್ಲಿ ಬಿರ್ಮಾ ದೇವಿ ವಾಸಿಸುತ್ತಿದ್ದರು. ಆಕೆಯ ಶವ ಬಹುತೇಕ ಸುಟ್ಟುಹೋದ ಸ್ಥಿತಿಯಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ, ಅವರ ಮನೆಯ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದೆ. ಸ್ಥಳೀಯ ಪೊಲೀಸರು ಮತ್ತು ಫೊರೆನ್ಸಿಕ್‌ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ' ಎಂದಿದ್ದಾರೆ.

ಮುಂದುವರಿದು, 'ಸಂಬಂಧಿಕರನ್ನು ಸಂಪರ್ಕಿಸಿದಾಗ, ಮಹಿಳೆಯ ಮಗಳು ಮತ್ತು ಅಳಿಯ ವಿಮೆ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೆಲವು ದಿನಗಳಿಂದ ಈ ಇಬ್ಬರು (ಮಗಳು, ಅಳಿಯ) ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಇದೀಗ ಅವರೇ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.