ಲಖನೌ: ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿರುವ ವಿಕಾಸಶೀಲ ಇನ್ಸಾನ್ ಪಕ್ಷ(ವಿಐಪಿ) ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ 'ಬ್ಯಾಂಡಿಟ್ ಕ್ವೀನ್' ಪ್ರಸಿದ್ಧಿಯ ಫೂಲನ್ ದೇವಿ ಅವರ ಪ್ರತಿಮೆಯನ್ನು ನಿರ್ಮಿಸಲು ಪ್ರಯತ್ನಿಸಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವಿಕರು ಮತ್ತು ಮೀನುಗಾರರನ್ನು ಒಳಗೊಂಡ ರಾಜ್ಯದ ನಿಶಾದ್ ಸಮುದಾಯವನ್ನು ಸೆಳೆಯಲು ಫೂಲನ್ ದೇವಿ ಅವರ ಪ್ರತಿಮೆ ನಿರ್ಮಿಸಲು ವಿಐಪಿ ಯೋಜನೆ ಹೂಡಿತ್ತು ಎನ್ನಲಾಗಿದೆ. ಆದರೆ ಉತ್ತರ ಪ್ರದೇಶ ಪೊಲೀಸರು ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಪ್ರಯಾಗ್ರಾಜ್, ಮಿರ್ಜಾಪುರ, ಭದೊಹಿ, ಬಾಂದಾ ಮತ್ತು ಇತರ ಜಿಲ್ಲೆಗಳಲ್ಲಿ ಬಿಹಾರದಿಂದ ತಂದಿರಿಸಿದ್ದ ಫೂಲನ್ ದೇವಿ ಅವರ ಪ್ರತಿಮೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 25ರಂದು, ಫೂಲನ್ ದೇವಿ ಅವರ ಹುತಾತ್ಮ ದಿನವೆಂದು ಆಚರಿಸುವ ವಿಚಾರವಾಗಿ ಬಿಹಾರದಲ್ಲಿ ಮಂತ್ರಿಯಾಗಿರುವ ವಿಐಪಿ ಮುಖಂಡ ಮುಖೇಶ್ ಸಹನಿ ನಡೆಸಲು ಮುಂದಾಗಿದ್ದ ಸಭೆಗೂ ಅನುಮತಿ ನಿರಾಕರಿಸಲಾಗಿದೆ.
ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರತಿಮೆಗಳನ್ನು ಇಡಲಾಗಿದೆ. ಹಲವು ಬಾರಿ ಮನವಿ ಮಾಡಿದರೂ ಪ್ರತಿಮೆಗಳನ್ನು ವಾಪಸ್ ನೀಡಿಲ್ಲ ಎಂದು ವಿಐಪಿ ಮುಖಂಡ ರಮೇಶ್ ಚಂದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.