ADVERTISEMENT

ಉ.ಪ್ರದೇಶದಲ್ಲಿ ಮಹಿಳಾ ಅಭ್ಯರ್ಥಿಯ ಸೀರೆ ಎಳೆದಾಡಿದ ರಾಜಕೀಯ ವೈರಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2021, 1:46 IST
Last Updated 9 ಜುಲೈ 2021, 1:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಬ್ಲಾಕ್‌ ಪಂಚಾಯಿತಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಬಂದಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಮಹಿಳಾ ಅಭ್ಯರ್ಥಿಯ ಸೀರೆಯನ್ನು ರಾಜಕೀಯ ವೈರಿಗಳು ಎಳೆದಾಡಿದ್ದಾರೆ.

ಈ ವಿಡಿಯೊವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಂಚಿಕೊಂಡಿದ್ದು, 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೂಂಡಾಗಳು ಮಹಿಳೆಗೆ ಅವಮಾನ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

ಲಖನೌದಿಂದ 130 ಕಿ.ಮೀ. ದೂರದಲ್ಲಿರುವ ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದಲ್ಲಿ ಬ್ಲಾಕ್ ಪಂಚಾಯಿತಿ ಚುನಾವಣೆ ಶನಿವಾರದಂದು ನಡೆಯಲಿದೆ. ಈ ನಡುವೆ ಅನೇಕ ಪ್ರದೇಶಗಳಲ್ಲಿ ಘರ್ಷಣೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿವೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಿಂಸಾಚಾರದ ವಿಡಿಯೊವೊಂದನ್ನು ಹಂಚಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟೀಕೆಗೈದಿದ್ದಾರೆ.

ನಾಮಪತ್ರ ಸಲ್ಲಿಸಲು ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಆದರೆ 14 ಪ್ರದೇಶಗಳಿಂದ ಹಿಂಸಾಚಾರ ವರದಿಯಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.