ADVERTISEMENT

ಉತ್ತರ ಪ್ರದೇಶದಲ್ಲಿ ಅಧಿಕ ಪ್ರಕರಣ; 2 ಲಕ್ಷ ಜನರು ಮನೆಯಲ್ಲೇ ಪ್ರತ್ಯೇಕ ವಾಸ

ಪಿಟಿಐ
Published 22 ಏಪ್ರಿಲ್ 2021, 16:53 IST
Last Updated 22 ಏಪ್ರಿಲ್ 2021, 16:53 IST
ಪ್ರಯಾಗ್‌ರಾಜ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಕಾಯುತ್ತಿರುವ ಕುಟುಂಬದವರು
ಪ್ರಯಾಗ್‌ರಾಜ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಕಾಯುತ್ತಿರುವ ಕುಟುಂಬದವರು   

ಲಖನೌ: ಉತ್ತರ ಪ್ರದೇಶದಲ್ಲಿ 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 34,379 ಹೊಸ ಪ್ರಕರಣಗಳು ದಾಖಲಾಗಿವೆ. ಇದು ರಾಜ್ಯದಲ್ಲಿ ಈವರೆಗೆ ಒಂದು ದಿನದಲ್ಲಿ ಪತ್ತೆಯಾಗಿರುವ ಅತಿ ಹೆಚ್ಚು ಪ್ರಕರಣಗಳಾಗಿವೆ.

ಇದೇ ಅವಧಿಯಲ್ಲಿ ಸೋಂಕಿನಿಂದ 16,514 ಮಂದಿ ಗುಣಮುಖರಾಗಿದ್ದು, 195 ಮಂದಿ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,76,765 ಮತ್ತು ಮೃತಪಟ್ಟವರ ಸಂಖ್ಯೆ 10,541 ಆಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಈವರೆಗೆ ಸೋಂಕಿನಿಂದ 7,06,414 ಮಂದಿ ಗುಣಮುಖರಾಗಿದ್ದಾರೆ ಹಾಗೂ 2,59,810 ಪ್ರಕರಣಗಳು ಸಕ್ರಿಯವಾಗಿವೆ, ಈ ಪೈಕಿ ಸುಮಾರು ಎರಡು ಲಕ್ಷ ಜನರು ಮನೆಯಲ್ಲಿಯೇ ಪತ್ಯೇಕ ವಾಸದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್‌ ಮೋಹನ್‌ ಪ್ರಸಾದ್‌ ಹೇಳಿದ್ದಾರೆ.

ADVERTISEMENT

ಬುಧವಾರ ಉತ್ತರ ಪ್ರದೇಶದಲ್ಲಿ 33,214 ಕೋವಿಡ್‌ ಪ್ರಕರಣಗಳು ಮತ್ತು 187 ಮಂದಿ ಮೃತಪಟ್ಟಿರುವುದು ವರದಿಯಾಗಿತ್ತು.

ರಾಜ್ಯದ ಕೋವಿಡ್‌ ಪರಿಸ್ಥಿತಿಯ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, 'ಪ್ರಸ್ತುತ ಆಮ್ಲಜನಕ ಸಿಲಿಂಡರ್‌ ಅಥವಾ ಟ್ಯಾಂಕರ್‌ಗಳ ಕೊರತೆ ಎದುರಾಗಿಲ್ಲ, ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಹೆಚ್ಚುವರಿ ಟ್ಯಾಂಕರ್‌ಗಳು ಹಾಗೂ ಸಿಲಿಂಡರ್‌ಗಳ ವ್ಯವಸ್ಥೆ ಅಗತ್ಯವಾಗಿದೆ. ಆಮ್ಲಜನಕ ಹಾಗೂ ಇತರೆ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗದಂತೆ ಖಚಿತಪಡಿಸಿಕೊಳ್ಳಿ' ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

'ಕೊರೊನಾ ಸೋಂಕಿತರಿಗೆ ಪಾರದರ್ಶಕವಾಗಿ ರೀತಿಯಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸುವುದು, ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡುವುದು ಹಾಗೂ ಅವರನ್ನು ಕ್ವಾರಂಟೈನ್‌ ಕೇಂದ್ರಗಳಲ್ಲಿ ಕನಿಷ್ಠ ಏಳು ದಿನಗಳು ಇರುವಂತೆ ಗಮನಿಸಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದನ್ನು ಆದ್ಯತೆಯ ಮೇರೆಗೆ ಮಾಡಬೇಕು' ಎಂದು ಸಿಎಂ ಆದಿತ್ಯನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.