ADVERTISEMENT

ಉತ್ತರ ಪ್ರದೇಶದಲ್ಲಿ ಹಸುಗಳಿಗಾಗಿ 515 ಆಂಬುಲೆನ್ಸ್: ಶೀಘ್ರದಲ್ಲೇ ತುರ್ತು ಸೇವೆ

ಪಿಟಿಐ
Published 15 ನವೆಂಬರ್ 2021, 5:13 IST
Last Updated 15 ನವೆಂಬರ್ 2021, 5:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಸುಗಳಿಗಾಗಿ ಆಂಬುಲೆನ್ಸ್ ಸೇವೆ ಆರಂಭಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಭಾನುವಾರಹೇಳಿದ್ದಾರೆ.

ಮಥುರಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚೌಧರಿ, ಈ ಬೃಹತ್ ಯೋಜನೆಗಾಗಿ 515 ಆಂಬುಲೆನ್ಸ್‌ಗಳು ಸಜ್ಜಾಗಿವೆ. ಬಹುಶಃ ದೇಶದಲ್ಲೇ ಇದು ಮೊದಲು ಎಂದು ತಿಳಿಸಿದ್ದಾರೆ.

ಸೇವೆಗಾಗಿ '112' ತುರ್ತು ಸಂಖ್ಯೆಯಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಹಸುಗಳಿಗೆ ಯೋಜನೆಯಿಂದ ತ್ವರಿತವಾಗಿ ಚಿಕಿತ್ಸೆ ಸಿಗಲಿದೆ. ತುರ್ತು ಸೇವೆಗಾಗಿ ಕರೆ ಬಂದ 15–20 ನಿಮಿಷದೊಳಗೆಪಶುವೈದ್ಯ ಮತ್ತು ಇಬ್ಬರು ಸಹಾಯಕರೊಂದಿಗೆ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಲಿದೆ.ಯೋಜನೆಯು ಡಿಸೆಂಬರ್‌ನಿಂದ ಆರಂಭವಾಗಲಿದ್ದು, ಅದರಂತೆ ಮನವಿ ಸ್ವೀಕಾರಕ್ಕಾಗಿ ಲಖನೌನಲ್ಲಿ ಕಾಲ್‌ಸೆಂಟರ್ ಸ್ಥಾಪಿಸಲಾಗುವುದುಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಉಚಿತವಾಗಿ ಉತ್ತಮ ಗುಣಮಟ್ಟದ ವೀರ್ಯ ಮತ್ತು ಭ್ರೂಣ ಕಸಿ ತಂತ್ರಜ್ಞಾನಕ್ಕೆ ಅವಕಾಶ ಕಲ್ಪಿಸುವುದರೊಂದಿಗೆ ರಾಜ್ಯದ ತಳಿ ಸಂವರ್ಧನಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಗುವುದು ಎಂದೂ ಹೇಳಿದ್ದಾರೆ.

ಭ್ರೂಣ ಕಸಿ ತಂತ್ರಜ್ಞಾನವು ರಾಜ್ಯದಲ್ಲಿ ಕ್ರಾಂತಿ ಮಾಡಲಿದೆ. ಇದು ಗೊಡ್ಡು ಹಸುಗಳೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುವಂತೆ ಮಾಡಲಿದೆ. ಹಸುಗಳು ಅಧಿಕ ಹಾಲು ಕೊಡಲಾರಂಭಿಸಿದರೆ, ಸಾಕುವವರು ಅವುಗಳನ್ನು ಬೀದಿಗೆ ಬಿಡುವುದಿಲ್ಲ. ಇದರಿಂದ ಬಿಡಾಡಿ ಹಸುಗಳ ಸಮಸ್ಯೆಯೂ ತಾನಾಗಿಯೇ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.‌

ಅಷ್ಟಲ್ಲದೆ, ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಡಾಡಿ ದನಗಳಿಗೆ ಆಶ್ರಯ ಕಲ್ಪಿಸಲು ಅನುದಾನ ನೀಡುತ್ತಿದೆ. ಹಿಂದಿನ ಯಾವ ಸರ್ಕಾರವೂ ಇಂತಹ ಕ್ರಮ ಕೈಗೊಂಡಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.