ADVERTISEMENT

ಉತ್ತರಾಖಂಡ ನೀರ್ಗಲ್ಲು ದುರಂತ| ರಕ್ಷಣೆಗೆ ಸುರಂಗದಲ್ಲಿ ರಂಧ್ರ

ಉತ್ತರಾಖಂಡ: ಕಾರ್ಯಾಚರಣೆ ಮುಂದುವರಿಕೆ

ಪಿಟಿಐ
Published 13 ಫೆಬ್ರುವರಿ 2021, 18:09 IST
Last Updated 13 ಫೆಬ್ರುವರಿ 2021, 18:09 IST
ಚಮೋಲಿ ಜಿಲ್ಲೆಯ ರೇಣಿ ಗ್ರಾಮದಲ್ಲಿ ಶನಿವಾರ ಪರಿಹಾರ ಕಾರ್ಯಾಚರಣೆ ನಡೆಯಿತು–ಪಿಟಿಐ ಚಿತ್ರ
ಚಮೋಲಿ ಜಿಲ್ಲೆಯ ರೇಣಿ ಗ್ರಾಮದಲ್ಲಿ ಶನಿವಾರ ಪರಿಹಾರ ಕಾರ್ಯಾಚರಣೆ ನಡೆಯಿತು–ಪಿಟಿಐ ಚಿತ್ರ   

ಜೋಷಿಮಠ (ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹದಿಂದಾಗಿ ಎನ್‌ಟಿ
ಪಿಸಿಯ ತಪೋವನ-ವಿಷ್ಣುಗಡ ಜಲ ವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಕ್ಕಿಬಿದ್ದಿರುವ 30ಕ್ಕೂ ಹೆಚ್ಚು ಕಾರ್ಮಿಕರ ರಕ್ಷಣೆಗಾಗಿ, ರಕ್ಷಣಾ ಪಡೆಗಳು ಸುರಂಗ ದಲ್ಲಿ ರಂಧ್ರ ಕೊರೆಯುವ ಕೆಲಸವನ್ನು ಶನಿವಾರ ತೀವ್ರಗೊಳಿಸಿವೆ.

‘ಕಾರ್ಮಿಕರು ಇರುವ ಸ್ಥಳವನ್ನು ತಲುಪಲು ಮೂರು ವಿಧದ ಕಾರ್ಯತಂತ್ರ ರೂಪಿಸಿದ್ದೇವೆ. ಸುರಂಗದೊಳಗೆ ಕ್ಯಾಮೆರಾ ಮತ್ತು ಪೈಪ್ ಕಳುಹಿಸುವ ಸಲು ವಾಗಿ ರಂಧ್ರವನ್ನು ಇನ್ನಷ್ಟು ಅಗಲ ಮಾಡಲಾಗಿದೆ. ಅಗತ್ಯವೆನಿಸಿದರೆ ಸಿಬ್ಬಂದಿಯನ್ನೂ ಈ ರಂಧ್ರದ ಮೂಲಕ ಕಳುಹಿಸಲಾಗುವುದು’ ಎಂದು ಎನ್‌ಟಿಪಿಸಿ ಯೋಜನೆಯ ಜನರಲ್ ಮ್ಯಾನೇಜರ್ ಆರ್.ಪಿ. ಅಹಿರ್ವಾಲ್ ತಿಳಿಸಿದರು.

‘ಒಂದು ಅಡಿ ವ್ಯಾಸದ ರಂಧ್ರದ ಮೂಲಕ ಕಳುಹಿಸುವ ಕ್ಯಾಮೆರಾವು ಸುರಂಗದೊಳಗಿನ ಚಿತ್ರಣವನ್ನು ಸೆರೆಹಿಡಿಯಲು ನೆರವಾಗುತ್ತದೆ. ಜೊತೆಗೆ ಕಳುಹಿಸಿರುವ ಪೈಪ್, ಸುರಂಗದಿಂದ ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ’ ಎಂದರು.

ADVERTISEMENT

ಬ್ಯಾರೇಜ್‌ನಿಂದ ನಿರಂತರವಾಗಿ ಕೆಸರು ಹಾಗೂ ನೀರು ಸುರಂಗದತ್ತ ಹರಿದುಬರುತ್ತಿದೆ. ಬ್ಯಾರೇಜ್‌ನಲ್ಲಿ ತುಂಬಿ ರುವ ಹೂಳನ್ನು ಹೊರತೆಗೆಯುವುದು ರಕ್ಷಣಾ ಕಾರ್ಯಕರ್ತರಿಗೆ ದೊಡ್ಡ ಸವಾಲಾಗಿದೆ. ಎನ್‌ಟಿಪಿಸಿ ತನ್ನ 100ಕ್ಕೂ ಹೆಚ್ಚು ವಿಜ್ಞಾನಿಗಳನ್ನು ಪರಿಹಾರ ಕಾರ್ಯಾಚರಣೆಯಲ್ಲಿ ನಿಯೋಜಿಸಿದೆ.

ಈವರೆಗೆ 38 ಶವಗಳು ಪತ್ತೆಯಾಗಿವೆ.166 ಮಂದಿ ಕಾಣೆಯಾಗಿದ್ದಾರೆ.

ಕೃತಕ ಸರೋವರದಿಂದ ಅಪಾಯವಿಲ್ಲ

ಹಿಮಪಾತದ ಕಾರಣ ರಿಷಿಗಂಗಾದ ಮೇಲ್ಭಾಗದಲ್ಲಿ ಕೃತಕ ಸರೋವರವೊಂದು ರಚನೆಯಾಗಿದೆ. ಆದರೆ, ಅಲ್ಲಿಂದ ನೀರು ಬಿಡುಗಡೆಯಾಗಲು ಆರಂಭಿಸಿದ್ದು, ಕೆಳಭಾಗಕ್ಕೆ ಹರಿದುಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಸಂಸ್ಥೆಯ ವಿಜ್ಞಾನಿಗಳ ತಂಡ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದೆ. ಕೃತಕ ಸರೋವರ ರಚನೆಯಿಂದ ನೀರ್ಗಲ್ಲು ಕುಸಿತದ ಅಪಾಯವಿಲ್ಲ ಎಂದು ಸಮೀಕ್ಷೆ ಹೇಳಿದೆ.

ದುರ್ಘಟನೆಯಿಂದ ಹೊರಬರುವ ಮೊದಲೇ ಮತ್ತೊಂದು ಅನಾಹುತ ಸಂಭವಿಸುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದರು. ನೀರ್ಗಲ್ಲು ಕುಸಿದರೆ, ಬೆಟ್ಟದ ಕೆಳಭಾಗದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.