ADVERTISEMENT

ಉತ್ತರಕಾಶಿ: 2 ಮೃತದೇಹ ಪತ್ತೆ, 9 ಯೋಧರು ಕಣ್ಮರೆ; ಕೇರಳದ 28 ಜನರು ಸುರಕ್ಷಿತ

250ಕ್ಕೂ ಹೆಚ್ಚು ಜನರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 22:17 IST
Last Updated 6 ಆಗಸ್ಟ್ 2025, 22:17 IST
ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಸಿಲುಕಿದವರನ್ನು ಯೋಧರು ಬುಧವಾರ ರಕ್ಷಿಸಿದರು ಪಿಟಿಐ ಚಿತ್ರ
ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಸಿಲುಕಿದವರನ್ನು ಯೋಧರು ಬುಧವಾರ ರಕ್ಷಿಸಿದರು ಪಿಟಿಐ ಚಿತ್ರ    

ಉತ್ತರಕಾಶಿ(ಉತ್ತರಾಖಂಡ)/ಲಖನೌ: ಮೇಘ ಸ್ಫೋಟದಿಂದ ಉಂಟಾದ ದಿಢೀರ್‌ ಪ್ರವಾಹದಿಂದ ನಲುಗಿರುವ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯ ಬುಧವಾರವೂ ಭರದಿಂದ ಸಾಗಿದೆ. ಅವಶೇಷಗಳಡಿಯಿಂದ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 250ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಕೇರಳ ಮೂಲದ 28 ಪ್ರವಾಸಿಗರಿದ್ದ ತಂಡ ನಾಪತ್ತೆಯಾಗಿತ್ತು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪ್ರವಾಸಿಗರ ಕುಟುಂಬದ ಸದಸ್ಯರು ಹೇಳಿದ್ದಾರೆ.

ಹರ್ಸಿಲ್‌ನಲ್ಲಿರುವ ಸೇನಾ ಶಿಬಿರಕ್ಕೆ ಭಾರಿ ಹಾನಿಯಾಗಿದೆ. ಈ ಮೊದಲು 11 ಯೋಧರು ಕಣ್ಮರೆಯಾಗಿದ್ದರು. ನಂತರ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಮಳೆ, ದಿಢೀರ್ ಪ್ರವಾಹ ಹಾಗೂ ಭೂಕುಸಿತದಂತಹ ವಿಕೋಪಗಳಿಂದಾಗಿ ರಕ್ಷಣಾ ಕಾರ್ಯ ಸವಾಲಾಗಿ ಪರಿಣಮಿಸಿದೆ. 25 ಅಡಿಗಳಷ್ಟು ಎತ್ತರದ ಅವಶೇಷಗಳ ಮೇಲೆ ತಾತ್ಕಾಲಿಕ ದಾರಿ ನಿರ್ಮಿಸಿ, ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ.

‘ಮಂಗಳವಾರ ಮಧ್ಯಾಹ್ನ 2ರಿಂದ ನನ್ನ ತ‌ಮ್ಮ ಹಾಗೂ ಆತನ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

‘ನನ್ನ ತಮ್ಮ, ಆತನ ಪತ್ನಿ ಹಾಗೂ ಮಗ ನಾಪತ್ತೆಯಾಗಿದ್ದಾರೆ. ಧರಾಲಿಯಲ್ಲಿರುವ ನಮ್ಮ ಮನೆ ಹಾಗೂ ಹೊಟೇಲ್‌ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ನಿನ್ನೆ ಮಧ್ಯಾಹ್ನ 2ಕ್ಕೆ ಕೊನೆಯದಾಗಿ ತಮ್ಮನೊಂದಿಗೆ ಮಾತನಾಡಿದ್ದೇನೆ’ ಎಂದರು.

‘ಹವಾಮಾನ ಅನುಕೂಲಕರವಾಗಿದ್ದಲ್ಲಿ, ನಾಳೆ ಅವರಿಗಾಗಿ ಶೋಧ ನಡೆಸಲಾಗುವುದು. ಇದಕ್ಕಾಗಿ ಹೆಲಿಕಾಪ್ಟರ್‌ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದೂ ಹೇಳಿದರು.

ರಕ್ಷಣಾ ಕಾರ್ಯ: ‘ಎನ್‌ಡಿಆರ್‌ಎಫ್‌ನ ಮೂರು ತಂಡಗಳು ಧರಾಲಿಯತ್ತ ಪ್ರಯಾಣ ಬೆಳೆಸಿವೆ. ಆದರೆ, ಭೂಕುಸಿತ
ದಿಂದಾಗಿ ಹೃಷಿಕೇಶ–ಉತ್ತರಕಾಶಿ ಹೆದ್ದಾರಿ ಬಂದ್ ಆಗಿರುವ ಕಾರಣ, ತಂಡಗಳು ಧರಾಲಿ ತಲುಪಲು ತೊಂದರೆಯಾಗಿದೆ’ ಎಂದು ಎನ್‌ಡಿಆರ್‌ಎಫ್‌ ಡಿಐಜಿ ಮೊಹಸಿನ್‌ ಶಹೀದ್‌ ಹೇಳಿದ್ದಾರೆ.

ಮಹಾರಾಷ್ಟ್ರದ 51 ಪ್ರವಾಸಿಗರು ಸುರಕ್ಷಿತ: ಉತ್ತರಕಾಶಿಯಲ್ಲಿ ಸಿಲುಕಿರುವ ರಾಜ್ಯದ 51 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಬುಧವಾರ ಹೇಳಿದೆ.

‘ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರುವ ಕುರಿತು ಎಲ್ಲ ಪ್ರಯತ್ನಗಳು ನಡೆದಿವೆ. ಈ ಸಂಬಂಧ, ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಎಸ್‌ಇಒಸಿ ಅಧಿಕಾರಿಗಳು ಹೇಳಿದ್ದಾರೆ.

ಮುಚ್ಚಿಹೋದ ಪ್ರಾಚೀನ ದೇಗುಲ: ಮೇಘ ಸ್ಫೋಟದ ಕಾರಣ, ಖೀರಗಂಗಾ ನದಿಯಲ್ಲಿ ಉಂಟಾದ ದಿಢೀರ್‌ ಪ್ರವಾಹದಲ್ಲಿ ಕೊಚ್ಚಿ ಬಂದ ಅವಶೇಷಗಳಡಿ, ಇಲ್ಲಿನ ಪ್ರಾಚೀನ ಶಿವ ದೇಗುಲ ‘ಕಲ್ಪ ಕೇದಾರ’ ಮುಚ್ಚಿಹೋಗಿದೆ.

ಬಹಳ ವರ್ಷಗಳ ಹಿಂದೆ ಸಂಭವಿಸಿದ್ದ ಪ್ರಾಕೃತಿಕ ವಿಪತ್ತಿನ ಕಾರಣ ಈ ದೇವಾಲಯ ನೆಲದಲ್ಲಿ ಹುದುಗಿತ್ತು. 1945ರಲ್ಲಿ ಕೈಗೊಂಡಿದ್ದ ಉತ್ಖನನದ ವೇಳೆ ಈ ದೇಗುಲ ಪತ್ತೆಯಾಗಿತ್ತು.

ಉತ್ತರಕಾಶಿ ಜಿಲ್ಲೆಯಲ್ಲಿ ಮೇಘಸ್ಫೋಟದಿಂದಾಗಿ ಉಂಟಾದ ದಿಢೀರ್ ಪ್ರವಾಹದಿಂದ ಭಟ್ವಾರಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದೆ  ಪಿಟಿಐ ಚಿತ್ರ 
.
ನಮಗೆ ಪ್ರತಿಯೊಬ್ಬರ ಜೀವವೂ ಮುಖ್ಯ. 24 ಗಂಟೆಯೂ ಹೈ ಅಲರ್ಟ್‌ ಆಗಿ ಇರುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಪುಷ್ಕರ್‌ ಸಿಂಗ್ ಧಾಮಿ ಉತ್ತರಾಖಂಡ ಮುಖ್ಯಮಂತ್ರಿ
ತಮ್ಮ ಸಹೋದ್ಯೋಗಿಗಳಲ್ಲಿ ಕೆಲವರು ಕಣ್ಮರೆಯಾಗಿದ್ದು ಸೇನಾ ಶಿಬಿರಕ್ಕೂ ಹಾನಿಯಾಗಿದೆ. ಆದರೂ ಯೋಧರು ಧೈರ್ಯಗುಂದದೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ
ಲೆಫ್ಟಿನೆಂಟ್ ಕರ್ನಲ್ ಮನೀಷ್‌ ಶ್ರೀವಾಸ್ತವ ರಕ್ಷಣಾ ವಕ್ತಾರ
ಧರಾಲಿಯಲ್ಲಿ 24 ಗಂಟೆಯೊಳಗೆ 27 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. ಪರ್ವತ ಪ್ರದೇಶಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬೀಳುವ ಮಳೆಯ ಪರಿಣಾಮ ಅಗಾಧವಾಗಿರುತ್ತದೆ. ಇಂತಹ ವಿದ್ಯಮಾನಕ್ಕೂ ಹವಾಮಾನ ಬದಲಾವಣೆಗೂ ನಂಟಿದೆ
ಮನೀಷ್‌ ಶ್ರೇಷ್ಠ ಜಲಶಾಸ್ತ್ರಜ್ಞ ಅಂತರರಾಷ್ಟ್ರೀಯ ಸಮಗ್ರ ಪರ್ವತ ಅಭಿವೃದ್ಧಿ ಕೇಂದ್ರ ನೇಪಾಳ

ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿದೆ: ಧಾಮಿ ‘ಮಳೆ ಸುರಿಯುತ್ತಿರುವ ಕಾರಣ ರಕ್ಷಣಾ ಕಾರ್ಯವು ಸವಾಲಿನಿಂದ ಕೂಡಿದೆ. ಸೇನೆ ಐಟಿಬಿಪಿ ಎಸ್‌ಡಿಆರ್‌ಎಫ್‌ನ ತಂಡಗಳು ಸನ್ನದ್ಧವಾಗಿವೆ. ಜಿಲ್ಲಾಧಿಕಾರಿ ಮತ್ತು ಎಸ್‌ಪಿ ದರ್ಜೆ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ. ‘ಆಹಾರ ಔಷಧಿಗಳ ವ್ಯವಸ್ಥೆ ಮಾಡಲಾಗಿದೆ. ಪಡಿತರ ವಿತರಣೆ ಕಾರ್ಯದ ಮೇಲ್ವಿಚಾರಣೆಗಾಗಿ 160 ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಮೂವರು ನೋಡಲ್‌ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ’ ಎಂದು ಅವರು ಪಿಟಿಐ ವಿಡಿಯೊಸ್‌ಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ 51 ಪ್ರವಾಸಿಗರು ಸುರಕ್ಷಿತ

ಮುಂಬೈ: ಉತ್ತರಕಾಶಿಯಲ್ಲಿ ಸಿಲುಕಿರುವ ರಾಜ್ಯದ 51 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಬುಧವಾರ ಹೇಳಿದೆ.

‘11 ಜನರು ನಾಂದೇಡ ಜಿಲ್ಲೆಯವರು. ಉಳಿದ 40 ಮಂದಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ’ ಎಂದು ರಾಜ್ಯ ತುರ್ತು ಕಾರ್ಯಾಚರಣೆಗಳ ಕೇಂದ್ರ (ಎಸ್‌ಇಒಸಿ) ಹೇಳಿದೆ. ‘ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರುವ ಕುರಿತು ಎಲ್ಲ ಪ್ರಯತ್ನಗಳು ನಡೆದಿವೆ. ಈ ಸಂಬಂಧ ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಎಸ್‌ಇಒಸಿ ಅಧಿಕಾರಿಗಳು ಹೇಳಿದ್ದಾರೆ.

ಸೇನೆಯಿಂದ ಕಾರ್ಯಾಚರಣೆ ಚುರುಕು

ನವದೆಹಲಿ: ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ ನಾಪತ್ತೆಯಾಗಿರುವವರ ಪತ್ತೆಗಾಗಿ ಭಾರತೀಯ ಸೇನೆ ತೀವ್ರ ಶೋಧ ಕಾರ್ಯಕೈಗೊಂಡಿದೆ. ಅವಶೇಷಗಳಡಿ ಸಿಲುಕಿರುವವರನ್ನು ವಾಸನೆ ಗ್ರಹಿಸಿ ಪತ್ತೆ ಮಾಡುವ ಸಾಮರ್ಥ್ಯವಿರುವ ಶ್ವಾನಗಳನ್ನು ಸೇನೆ ಶೋಧ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ. ಡ್ರೋನ್‌ಗಳು ಹಾಗೂ ಭೂಮಿ ಅಗೆಯುವ ಯಂತ್ರಗಳನ್ನು ಕೂಡ ಬಳಸುತ್ತಿದೆ. ‘ವಿವಿಧೆಡೆ ಸಿಲುಕಿರುವವರ ಶೋಧ ಮತ್ತು ರಕ್ಷಣೆಗಾಗಿ ಎಂಐ–17 ಹಾಗೂ ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ಸನ್ನದ್ಧವಾಗಿರಿಸಲಾಗಿದೆ.

ಪ್ರಮುಖ ಅಂಶಗಳು

* ಸೇನೆಯ 125 ಅಧಿಕಾರಿಗಳು ಹಾಗೂ ಯೋಧರು ಐಟಿಬಿಪಿಯ 83 ಅಧಿಕಾರಿಗಳು ಹಾಗೂ ಯೋಧರು ಬಿಆರ್‌ಒದ ಅಧಿಕಾರಿಗಳು 100ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ

* 14 ರಾಜಸ್ಥಾನ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷವರ್ಧನ್ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ನೇತೃತ್ವ ವಹಿಸಿದ್ದಾರೆ

* ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಂಗ್ನಾನಿ ಬಳಿಯ ಲಿಮಾಚಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಹೀಗಾಗಿ ಧರಾಲಿಗೆ ತೆರಳಬೇಕಿದ್ದ ರಕ್ಷಣಾ ಸಿಬ್ಬಂದಿ ದಾರಿಯಲ್ಲಿಯೇ ಸಿಲುಕಿದ್ದಾರೆ

* ರುದ್ರಪ್ರಯಾಗದಲ್ಲಿ ಮಂದಾಕಿನಿ ಹರಿದ್ವಾರದಲ್ಲಿ ಬಾಣಗಂಗಾ ದೇವಪ್ರಯಾಗದಲ್ಲಿ ಭಾಗೀರಥಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ 

Cut-off box - ಅವಶೇಷಗಳಡಿ ಮುಚ್ಚಿಹೋದ ಪ್ರಾಚೀನ ಶಿವ ದೇಗುಲ  ಮೇಘ ಸ್ಫೋಟದ ಕಾರಣ ಖೀರಗಂಗಾ ನದಿಯಲ್ಲಿ ಉಂಟಾದ ದಿಢೀರ್‌ ಪ್ರವಾಹದಲ್ಲಿ ಕೊಚ್ಚಿ ಬಂದ ಅವಶೇಷಗಳಡಿ ಇಲ್ಲಿನ ಪ್ರಾಚೀನ ಶಿವ ದೇಗುಲ ‘ಕಲ್ಪ ಕೇದಾರ’ ಮುಚ್ಚಿಹೋಗಿದೆ. ಬಹಳ ವರ್ಷಗಳ ಹಿಂದೆ ಸಂಭವಿಸಿದ್ದ ಪ್ರಾಕೃತಿಕ ವಿಪತ್ತಿನ ಕಾರಣ ಈ ದೇವಾಲಯ ನೆಲದಲ್ಲಿ ಹುದುಗಿತ್ತು. 1945ರಲ್ಲಿ ಕೈಗೊಂಡಿದ್ದ ಉತ್ಖನನದ ವೇಳೆ ಈ ದೇಗುಲ ಪತ್ತೆಯಾಗಿತ್ತು. ಸದ್ಯ ಅದರ ಗೋಪುರ ಮಾತ್ರ ಹೊರಗೆ ಕಾಣುತ್ತದೆ. ಇದರ ವಾಸ್ತುಶಿಲ್ಪವು ಕೇದಾರನಾಥ ಧಾಮದಲ್ಲಿರುವ ಶಿವನ ದೇವಾಲಯವನ್ನೇ ಹೋಲುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.