ADVERTISEMENT

ಸಿಲ್ಕ್ಯಾರಾ ಸುರಂಗ ಕುಸಿತ: ಎಲ್ಲಾ 41 ಕಾರ್ಮಿಕರ ರಕ್ಷಣೆ ಯಶಸ್ವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2023, 17:17 IST
Last Updated 28 ನವೆಂಬರ್ 2023, 17:17 IST
<div class="paragraphs"><p>ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರ ಮೊಗದಲ್ಲಿ ಚಿಮ್ಮಿದ ನಗು</p></div>

ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರ ಮೊಗದಲ್ಲಿ ಚಿಮ್ಮಿದ ನಗು

   

ಪಿಟಿಐ ಚಿತ್ರ

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಕುಸಿದ ಸುರಂಗದಲ್ಲಿ 60 ಮೀಟರ್‌ಗಳಷ್ಟು ಉದ್ದದ ರಂಧ್ರ ಕೊರೆದಿರುವ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ 17 ದಿನಗಳಿಂದ ಸಿಲುಕಿದ್ದ ಕಾರ್ಮಿಕರ ಸಂಕಷ್ಟವನ್ನು ಕೊನೆಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಾರ್ಮಿಕರ ಸಂಬಂಧಿಕರು, ಅಧಿಕಾರಿಗಳು ಹಾಗೂ ಕಳೆದ ಎರಡು ವಾರಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಕಾರ್ಮಿಕರು ಸುರಂಗದತ್ತ ನಿರೀಕ್ಷೆಯ ನೋಟವನ್ನೇ ನೆಟ್ಟಿದ್ದಾರೆ.

ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ರಿಷಿಕೇಶದಲ್ಲಿರುವ ಏಮ್ಸ್‌ (AIIMS) ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ತುರ್ತು ನಿಘಾ ಘಟಕ, ಹೃದ್ರೋಗ ಹಾಗೂ ಮಾನಸಿಕ ಆರೋಗ್ಯ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರು ಸ್ಥಳದಲ್ಲಿ ಸ್ಥಾಪಿಸಿರುವ ಆಸ್ಪತ್ರೆಗೆ ಧಾವಿಸಿದ್ದಾರೆ. ತುರ್ತು ಸೇವೆಗಾಗಿ ಮೂರು ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕರನ್ನು ಹೆಲಿಕಾಪ್ಟರ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ರವಾನಿಸುವ ಸಾಧ್ಯತೆ ಇದೆ. 

ಕಾರ್ಮಿಕರನ್ನು ಕರೆದೊಯ್ಯಲು ಸಿಲ್ಕ್ಯಾರಾದ ಸುರಂಗದೊಳಗೆ ಸಜ್ಜಾಗಿರುವ ಆಂಬುಲೆನ್ಸ್‌ಗಳು

ADVERTISEMENT

ಸುರಂಗದೊಳಗೆ ಆಂಬುಲೆನ್ಸ್‌ಗಳು ಪ್ರವೇಶಿಸಿವೆ. ಯಾವುದೇ ಕ್ಷಣದಲ್ಲಿ ಹೊರಬರುವ ಕಾರ್ಮಿಕರನ್ನು ಸಮೀಪದಲ್ಲಿ ಸ್ಥಾಪಿಸಿರುವ ಆಸ್ಪತ್ರೆಗೆ ಸಾಗಿಸಲು ಸಜ್ಜಾಗಿವೆ.

ಕಾರ್ಮಿಕರ ಸುರಕ್ಷಿತ ವಾಪಾಸಾತಿಗೆ ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಬೆಟ್ಟತ ತಪ್ಪಲಿನಲ್ಲಿರುವ ದೇಗುದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು

ಸಿಲ್ಕ್ಯಾರಾದ ಸುರಂಗದೊಳಗೆ ಕಳೆದ 17 ದಿನಗಳಿಂದ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಹಂತ ತಲುಪಿರುವ ಹೊತ್ತಿಗೆ ಅವರ ನೆರವಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಕಾರ್ಮಿಕರನ್ನು ತಲುಪಲು ಏಳು ಅಡಿಗಳು ಮಾತ್ರ ಬಾಕಿ ಇವೆ. ಈವರೆಗೂ ತೆಗೆದಿರುವ ಸುರಂಗದಲ್ಲಿನ ಮಣ್ಣನ್ನು ಹೊರಕ್ಕೆ ತೆಗೆಯಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ನಿಷೇಧಿತ ಇಲಿ ಬಿಲ ತಂತ್ರಗಾರಿಕೆಯನ್ನು ಬಳಸಿ 2 ಅಡಿ ಅಗಲದ ಪೈಪ್ ಅಳವಡಿಸಲಾಗುತ್ತಿದೆ. ಇದರ ಮೂಲಕ ಕಾರ್ಮಿಕರನ್ನು ಹೊರಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ಥಳದಿಂದ ನಿರ್ಗಮಿಸಿದ್ದಾರೆ. ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಹಲವು ಗಂಟೆಗಳ ಕಾಲ ಇದ್ದು ಪ್ರಕ್ರಿಯೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರನ್ನು ಸ್ವಾಗತಿಸಲು ಹೂವಿನ ಹಾರಗಳನ್ನೂ ತರಿಸಲಾಯಿತು. ಸುರಂಗ ಕೊರೆಯುವ ಕಾರ್ಯ ಇನ್ನೂ ಎರಡು ಮೀಟರ್ ಬಾಕಿ ಇದ್ದು, ನಂತರ ಪೈಪ್ ಅಳವಡಿಸುವ ಕಾರ್ಯ ಆರಂಭವಾಗಬೇಕಿದೆ.

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಹಂತದಲ್ಲಿದ್ದು, ಹೊರಬರುವ ಕಾರ್ಮಿಕರನ್ನು ಹೆಚ್ಚುವರಿ ಚಿಕಿತ್ಸೆಗೆ ಸಾಗಿಸಲು ಚಿನ್ಯಾಲಿಸೂರ್‌ ಹೆಲಿಪ್ಯಾಡ್ ಬಳಿ ವೈದ್ಯಕೀಯ ನೆರವಿಗಾಗಿ ಹೆಲಿಕಾಪ್ಟರ್ ಸಿದ್ಧಗೊಂಡಿದೆ.

ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ 15ರಿಂದ 20 ನಿಮಿಷಗಳಲ್ಲಿ ಕಾರ್ಮಿಕರನ್ನು ಹೊರಕ್ಕೆ ತರುವ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ವಿಪತ್ತು ನಿರ್ವಹಣಾ ತಂಡವು ಕಾರ್ಮಿಕರನ್ನು ಹೊರಕ್ಕೆ ಕರೆತರಲಿದೆ. 41 ಕಾರ್ಮಿಕರನ್ನು ಹೊರತರಲು ಅರ್ಧ ಗಂಟೆ ಸಾಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಮೊದಲ ಕಾರ್ಮಿಕ ಸುರಕ್ಷಿತವಾಗಿ ಹೊರಕ್ಕೆ ಕರೆತರುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ

ಹೊರ ಬಂದ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಿದ ಆಂಬುಲೆನ್ಸ್‌. ರಕ್ಷಣಾ ತಂಡ ಕಾರ್ಮಿಕರನ್ನು ಸುರಂಗದಿಂದ ಹೊರಕ್ಕೆ ಕರೆತರುತ್ತಿದ್ದಂತೆ ಸ್ಥಳದಲ್ಲಿ ಮೂಡಿದ ಹರ್ಷ. ನೆರೆದ ಜನರಿಂದ ಜೈಕಾರ...

ಸುರಂಗದಿಂದ ಹೊರ ಬಂದ ಐವರು ಕಾರ್ಮಿಕರು. ಒಳಗಿರುವ ಉಳಿದ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದರು.

ಸುರಂಗದಿಂದ ಹೊರಗೆ ಬಂದ 9 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಬರುತ್ತಿದ್ದಂತೆ ಅವರನ್ನು ಹೊತ್ತ ಆಂಬುಲೆನ್ಸ್‌ ಆಸ್ಪತ್ರೆಯತ್ತ ಸಾಗಿತು

ನಿಷೇಧಿ ಇಲಿ ಬಿಲ ಮೈನಿಂಗ್ ತಂತ್ರಜ್ಞಾನ ಬಳಸಿ ಕೊರೆದ ರಂಧ್ರಕ್ಕೆ ಎರಡು ಅಡಿ ವ್ಯಾಸದ ಕೊಳವೆ ಅಳವಡಿಸಲಾಗಿದೆ. ಅದರೊಳಗೆ ಸ್ಟ್ರೆಚರ್‌ ಬಳಸಿ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಕ್ಕೆ ಕರೆತರಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈವರೆಗೂ 15 ಕಾರ್ಮಿಕರು ಸುರಕ್ಷಿತವಾಗಿ ಹೊರಕ್ಕೆ ಬಂದಿದ್ದಾರೆ.

ರಕ್ಷಣಾ ಕಾರ್ಯ ಯಶಸ್ವಿ. ಸಿಹಿ ಹಂಚಿ ಸಂಭ್ರಮಿಸಿದ ಸ್ಥಳೀಯರು

ಸುರಂಗದಿಂದ ಹೊರಬಂದ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.

ಸುರಂಗಕ್ಕೆ ಅಳವಡಿಸಿದ ಕೊಳವೆ ಮೂಲಕ ಹೊರಕ್ಕೆ ಬರುತ್ತಿರುವ ಕಾರ್ಮಿಕ

ಸುರಂಗಕ್ಕೆ ಅಳವಡಿಸಿದ ಕೊಳವೆ ಮೂಲಕ ಹೊರಕ್ಕೆ ಬರುತ್ತಿರುವ ಕಾರ್ಮಿಕ

ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹರ್ಷ ವ್ಯಕ್ತಪಡಿಸಿದ್ದಾರೆ. ‘ಉತ್ತರಾಖಂಡದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ತಿಳಿದು ಹರ್ಷವೆನಿಸಿದೆ. ಕಳೆದ 17 ದಿನಗಳಿಂದ ನಡೆದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಎದುರಾದ ಹಲವು ಅಡೆತಡೆಗಳು, ಸವಾಲುಗಳನ್ನು ಎದುರಿಸಿ ಇವರನ್ನು ರಕ್ಷಿಸಲಾಗಿದೆ. ಇವರನ್ನು ರಕ್ಷಿಸುವಲ್ಲಿ ಕಲ್ಪಿಸಲಾದ ಕ್ಲಿಷ್ಟಕರ ಮೂಲಸೌಕರ್ಯ ಹಾಗೂ ವೈಯಕ್ತಿಕ ಅಪಾಯವನ್ನೂ ಮೀರಿ ಕಾರ್ಮಿಕರನ್ನು ಹೊರತರುವಲ್ಲಿ ನಡೆಸಿದ ಸಾಹಸಕ್ಕೆ ಇಡೀ ದೇಶವೇ ವಂದಿಸುತ್ತದೆ. ಐತಿಹಾಸಿಕವಾದ ಈ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ನುರಿತ ತಜ್ಞರು, ಕಾರ್ಮಿಕರಿಗೂ ಅಭಿನಂದನೆಗಳು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.