ADVERTISEMENT

ಎಲ್ಲರ ವಿಕಾಸ ನೀತಿಗೆ ರಾಮನೇ ಸ್ಫೂರ್ತಿ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 21:00 IST
Last Updated 23 ಅಕ್ಟೋಬರ್ 2022, 21:00 IST
ಅಯೋಧ್ಯೆಯಲ್ಲಿ ಭಾನುವಾರ ನಡೆದ ದೀಪೋತ್ಸವದ ದೃಶ್ಯ –ಪಿಟಿಐ ಚಿತ್ರ
ಅಯೋಧ್ಯೆಯಲ್ಲಿ ಭಾನುವಾರ ನಡೆದ ದೀಪೋತ್ಸವದ ದೃಶ್ಯ –ಪಿಟಿಐ ಚಿತ್ರ   

ಅಯೋಧ್ಯೆ (ಉತ್ತರ ಪ್ರದೇಶ):ನಮ್ಮ ಸರ್ಕಾರದ ‘ಎಲ್ಲರ ಜತೆ, ಎಲ್ಲರ ವಿಕಾಸ’ ಎಂಬ ಧ್ಯೇಯವು ಶ್ರೀರಾಮನ ಉಪದೇಶ ಮತ್ತು ಆಳ್ವಿಕೆಯಿಂದ ಸ್ಫೂರ್ತಿ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2020ರ ಆಗಸ್ಟ್‌ನಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಿದ ನಂತರ ಇದೇ ಮೊದಲ ಬಾರಿ ಇಲ್ಲಿಗೆ ಭೇಟಿ ನೀಡಿದ ಮೋದಿ ಅವರು, ಮಂದಿರ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಇಲ್ಲಿನ ರಾಮಕಥಾ ಉದ್ಯಾನದಲ್ಲಿ ಸಾಂಕೇತಿಕವಾಗಿ ರಾಮಪಟ್ಟಾಭಿಷೇಕವನ್ನು ಅವರು ನೆರವೇರಿಸಿದರು.

ಇಲ್ಲಿರುವ ತಾತ್ಕಾಲಿಕ ಮಂದಿರದಲ್ಲಿ ರಾಮನಿಗೆ ಪೂಜೆ ಸಲ್ಲಿಸಿ ಮಾತನಾಡಿದ ಮೋದಿ, ‘ಮುಂದಿನ 25 ವರ್ಷಗಳಲ್ಲಿ ಭಾರತೀಯರು ಅತ್ಯಂತ ಕಠಿಣವಾದ ಗುರಿಗಳನ್ನು ತಲುಪಲು ಮತ್ತು ಅಭಿವೃದ್ಧಿಯನ್ನು ಸಾಧಿಸಲು ಶ್ರೀರಾಮನ ಧ್ಯೇಯಗಳೇ ದಾರಿದೀಪವಾಗಲಿವೆ. ಸಂವಿಧಾನದ ಮೂಲಪ್ರತಿಯಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಚಿತ್ರವಿತ್ತು. ಇದು ಸಂವಿಧಾನವು ನಮಗೆ ನೀಡಿರುವ ಹಕ್ಕುಗಳಿಗೆ ಮತ್ತೊಂದು ಖಾತರಿ’ ಎಂದು ಮೋದಿ ಹೇಳಿದ್ದಾರೆ.

ADVERTISEMENT

ದೀಪೋತ್ಸವ: ಇಲ್ಲಿನ ಸರಯೂ ನದಿ ದಂಡೆಯಲ್ಲಿ ಬಾನುವಾರ ಸಂಜೆ, 15.76 ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. ಪ್ರಧಾನಿ ಇದಕ್ಕೆ ಸಾಕ್ಷಿಯಾದರು. ರಾಮಕಥಾ ಉದ್ಯಾನದಲ್ಲಿ ಆಯೋಜಿಸಲಾಗಿದ್ದ 3ಡಿ ಮತ್ತು ಲೇಸರ್‌ ಬೆಳಕಿನ ಪ್ರದರ್ಶನವನ್ನು ಅವರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.