ನವದೆಹಲಿ: ಅವಘಡಗಳ ಕಾರಣಕ್ಕಾಗಿ ‘ವಂದೇ ಭಾರತ್ ಏಕ್ಸ್ಪ್ರೆಸ್’ ರೈಲು ಸತತ ಮೂರನೇ ದಿನವೂ ಸುದ್ದಿಯಲ್ಲಿದ್ದು, ಶನಿವಾರನವದೆಹಲಿ– ವಾರಾಣಸಿ ಮಾರ್ಗದ ವಂದೇ ಭಾರತ್ ಏಕ್ಸ್ಪ್ರೆಸ್ ರೈಲಿನ ಚಕ್ರಗಳು ಜಾಮ್ ಆಗಿದ್ದರಿಂದ ಪ್ರಯಾಣಿಕರಿಗೆ ಪರ್ಯಾಯವಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಯಿತು.
‘ನವದೆಹಲಿಯ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಹೊರಟ ಸೆಮಿ ಹೈಸ್ಪೀಡ್ ರೈಲು, 90 ಕಿ.ಮೀ. ಕ್ರಮಿಸಿದ ಬಳಿಕ ಉತ್ತರಪ್ರದೇಶದ ಖುಜ್ರಾ ನಿಲ್ದಾಣದ ಬಳಿ ಚಕ್ರಗಳು ಜಾಮ್ ಆಗಿದ್ದರಿಂದ ಸಂಚಾರ ಸ್ಥಗಿತಗೊಂಡಿತು. ಬೆಳಿಗ್ಗೆ 7.30ರ ರೈಲಿನಲ್ಲಿದ್ದ ಎಲ್ಲ 1,068 ಪ್ರಯಾಣಿಕರನ್ನು ಇಳಿಸಲಾಯಿತು. ಸುಮಾರು 12.40ರ ವೇಳೆಗೆ ದೆಹಲಿಯಿಂದ ಬಂದ ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಕಳುಹಿಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ವಂದೇ ಭಾರತ್ ರೈಲಿನ ಬೋಗಿ (ರೈಲು ಸಂಖ್ಯೆ: 22436) ಸಿ8 ಕೋಚ್ನ ಟ್ರಾಕ್ಷನ್ ಮೋಟಾರ್ನಲ್ಲಿನ ಬೇರಿಂಗ್ ದೋಷ ಕಂಡುಬಂದಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಯಿತು. ಬೇರಿಂಗ್ ವೈಫಲ್ಯವನ್ನು ಸರಿಪಡಿಸಲಾಗಿದ್ದು, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ’ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.
ಹೊಸದಾಗಿ ಸಂಚಾರ ಆರಂಭಿಸಿರುವ ವಂದೇ ಭಾರತ್ ಏಕ್ಸ್ಪ್ರೆಸ್ಗೆ ಗುರುವಾರ ಗಾಂಧಿನಗರ–ಮುಂಬೈ ಮಾರ್ಗದಲ್ಲಿ ಎಮ್ಮೆಗಳು ಅಡ್ಡಬಂದಿದ್ದವು. ಶುಕ್ರವಾರ ಗುಜರಾತ್ನ ಆಣಂದ್ ಸಮೀಪ ಈ ರೈಲು ಹಸುವಿಗೆ ಡಿಕ್ಕಿ ಹೊಡೆದಿತ್ತು. ಈ ಎರಡೂ ಅವಘಡಗಳಲ್ಲಿ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.