ADVERTISEMENT

ಗ್ಯಾನವಾಪಿ: ಪೂಜೆಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ಫೆ.28ಕ್ಕೆ

ಪಿಟಿಐ
Published 15 ಫೆಬ್ರುವರಿ 2024, 11:00 IST
Last Updated 15 ಫೆಬ್ರುವರಿ 2024, 11:00 IST
<div class="paragraphs"><p>ಗ್ಯಾನವಾಪಿ ಮಸೀದಿ ಸಂಕೀರ್ಣ</p></div>

ಗ್ಯಾನವಾಪಿ ಮಸೀದಿ ಸಂಕೀರ್ಣ

   

ವಾರಾಣಸಿ: ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ಹಿಂದೂ ಅರ್ಚಕರಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಗ್ಯಾನವಾಪಿ ಮಸೀದಿ ಸಮಿತಿಯ ಮನವಿಯ ವಿಚಾರಣೆ ಫೆ. 28ರಂದು ನಡೆಸಲಾಗುವುದು ಎಂದು ವಾರಾಣಸಿ ನ್ಯಾಯಾಲಯ ಗುರುವಾರ ಹೇಳಿದೆ.

ಗ್ಯಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ವಿಗ್ರಹಪೂಜೆಗೆ ಅರ್ಚಕರಿಗೆ ಅವಕಾಶ ಕಲ್ಪಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯ ಜ. 31ರಂದು ಆದೇಶಿಸಿತ್ತು. 

ADVERTISEMENT

ಇದನ್ನು ಪ್ರಶ್ನಿಸಿ ಮಸೀದಿ ಸಮಿತಿಯು ನ್ಯಾಯಾಲಯದ ಮೊರೆ ಹೋಗಿತ್ತು. ವಿಚಾರಣೆಗೆ ಫೆ. 28ರಂದು ದಿನಾಂಕ ನಿಗದಿಪಡಿಸುವುದಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅನಿಲ್ ಕುಮಾರ್ ಅವರು ಹೇಳಿದ್ದಾರೆ ಎಂದು ವಕೀಲ ಎಂ.ಎಂ.ಯಾದವ್ ತಿಳಿಸಿದ್ದಾರೆ.

ಇದರ ಜತೆಯಲ್ಲೇ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲೂ ಮಸೀದಿ ಸಮಿತಿ ಅರ್ಜಿ ಸಲ್ಲಿಸಿದೆ.

ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ಕಲ್ಪಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯ ಜನವರಿ 31 ರಂದು ಆದೇಶ ಹೊರಡಿಸಿತ್ತು. ಮಸೀದಿಯ ನಿರ್ವಹಣೆ ನೋಡಿಕೊಳ್ಳುತ್ತಿರುವ ಅಂಜುಮಾನ್‌ ಇಂತೆಜಾಮಿಯಾ ಸಮಿತಿಯು ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರೊಬ್ಬರು ನಿವೃತ್ತಿಯ ದಿನದಂದೇ ‘ತರಾತುರಿಯಲ್ಲಿ’ ಆದೇಶ ಹೊರಡಿಸಿದ್ದಾರೆ ಎಂದು ಮಸೀದಿ ಸಮಿತಿ ಪರ ವಕೀಲರು ಪೀಠಕ್ಕೆ ತಿಳಿಸಿದರು. ವಾರಾಣಸಿ ಜಿಲ್ಲಾ ನ್ಯಾಯಾಧೀಶ ಅಜಯ್‌ ಕೃಷ್ಣ ವಿಶ್ವೇಶ ಅವರು ಜ.31 ರಂದು ಸೇವೆಯಿಂದ ನಿವೃತ್ತಿಯಾಗಿದ್ದರು.

‘ಆ ಸ್ಥಳದಲ್ಲಿ ಹಿಂದಿನಿಂದಲೂ ಪೂಜೆ ನಡೆಸಲಾಗುತ್ತಿತ್ತು. 1993 ರಲ್ಲಿ ಪೂಜೆ ನಿಲ್ಲಿಸಲಾಗಿತ್ತು. ಈಗ ಪೂಜೆಗೆ ಅವಕಾಶ ನೀಡಿರುವುರಿಂದ ಅವರಿಗೆ (ಮುಸ್ಲಿಮರಿಗೆ) ಯಾವುದೇ ತೊಂದರೆ ಉಂಟಾಗಿಲ್ಲ’ ಎಂದು ಹಿಂದೂ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.