ನಟ ವೀರ್ ದಾಸ್
ನವದೆಹಲಿ: ಏರ್ ಇಂಡಿಯಾ ವಿಮಾನದ ಸೇವೆಯ ಕುರಿತು ಆಗಾಗ ದೂರುಗಳು ಕೇಳಿಬರುತ್ತಿವೆ. ಈಗ ಬಾಲಿವುಡ್ ಹಾಸ್ಯ ನಟ ವೀರ್ ದಾಸ್ ಅವರು, ಕಾಲು ಮುರಿತದಿಂದ ಚೇತರಿಸಿಕೊಳ್ಳುತ್ತಿರುವ ಪತ್ನಿಗೆ ಗಾಲಿ ಕುರ್ಚಿ ಒದಗಿಸಿಲ್ಲವೆಂದು ದೂರಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಏರ್ಲೈನ್ನ ಪ್ರಣಾಮ್ ಸೇವೆಯಲ್ಲಿ ಗಾಲಿ ಕುರ್ಚಿಯ ಅಗತ್ಯತೆಯನ್ನು ಮೊದಲೇ ಬುಕ್ ಮಾಡಲಾಗಿದ್ದರೂ ವಿಮಾನ ಏರುವ ವೇಳೆ ನಿರಾಕರಿಸಿದ್ದಾರೆ ಎಂದು ದಾಸ್ ಹೇಳಿದ್ದಾರೆ.
‘ಮುಂಬೈನಿಂದ ದೆಹಲಿಗೆ ತೆರಳುವ ಏರ್ ಇಂಡಿಯಾ ವಿಮಾನಕ್ಕೆ ಎರಡು ಟಿಕೆಟ್ಗಳಿಗೆ ತಲಾ ₹50 ಸಾವಿರ ಪಾವತಿಸಿದ್ದೇವೆ. ಆದರೆ ಪ್ರಯಾಣದ ವೇಳೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಎರಡು ಗಂಟೆ ವಿಮಾನ ತಡವಾಗಿ ಬಂದಿತ್ತು. ಪತ್ನಿಯ ಕಾಲಿಗೆ ಪೆಟ್ಟಾಗಿದ್ದರಿಂದ ನಾಲ್ಕು ಬ್ಯಾಗ್ಗಳನ್ನು ಹಿಡಿದುಕೊಂಡಿದ್ದೆ, ಪುರುಷ ಸಿಬ್ಬಂದಿ ಬಳಿ ಸಹಾಯ ಕೇಳಿದರೂ, ಅವರು ನಮ್ಮನ್ನು ಕಡೆಗಣಿಸಿದರು. ದೆಹಲಿಯಲ್ಲಿ ಇಳಿದ ಮೇಲೂ ಗಾಲಿಕುರ್ಚಿ ಸೇವೆ ನೀಡದ ಕಾರಣ ನನ್ನ ಪತ್ನಿ ಮೆಟ್ಟಿಲುಗಳ ಮೂಲಕವೇ ಇಳಿಯಬೇಕಾಯಿತು’ ಎಂದು ದೂರಿದ್ದಾರೆ.
‘ಪ್ರೀತಿಯ ಏರ್ ಇಂಡಿಯಾ ನಿಮ್ಮ ಗಾಲಿ ಕುರ್ಚಿಗಳನ್ನು ವಾಪಸ್ ಪಡೆದುಕೊಳ್ಳಿ. ನಾನು ನಿಮಗೆ ಬದುಕಿನುದ್ದಕ್ಕೂ ಆಭಾರಿಯಾಗಿರುತ್ತೇನೆ, ನೀವು ಅತ್ಯುತ್ತಮ ಕ್ಯಾಬಿನ್ ಸಿಬ್ಬಂದಿಯನ್ನು ಹೊಂದಿದ್ದೀರಿ, ಈ ಪೋಸ್ಟ್ನಲ್ಲಿ ಇದನ್ನು ಬರೆಯಲು ತುಂಬಾ ನೋವಾಗುತ್ತಿದೆ’ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ‘ದಾಸ್ ಅವರೆ ನಿಮ್ಮ ಅನುಭವ ಮತ್ತು ಸಹಾನುಭೂತಿಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ದಯವಿಟ್ಟು ಟಿಕೆಟ್ ಕಾಯ್ದಿರಿಸಿದ ಮಾಹಿತಿಯನ್ನು ಕಳುಹಿಸಿ’ ಎಂದು ಹೇಳಿರುವುದಾಗಿ ಸುದೀರ್ಘ ಪೋಸ್ಟ್ನಲ್ಲಿ ದಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.