ADVERTISEMENT

ಚಿಕ್ಕಾಸಿನ ಕೊಡುಗೆ: ಮೊಯಿಲಿ

ಸದ್ಯದ ಬಿಕ್ಕಟ್ಟಿಗೆ ₹ 17.5 ಲಕ್ಷ ಕೋಟಿ ಕೊಡುಗೆ ಅಗತ್ಯ ಇದೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 18:03 IST
Last Updated 18 ಏಪ್ರಿಲ್ 2020, 18:03 IST
ಮೊಯಿಲಿ
ಮೊಯಿಲಿ   

ನ‌ವದೆಹಲಿ: ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಆರ್ಥಿಕ ಉತ್ತೇಜನಾ ಕೊಡುಗೆಯನ್ನು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಅವರು ಟೀಕಿಸಿದ್ದಾರೆ.

ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಆರ್ಥಿಕ ಪರಿಹಾರ ಕೊಡುಗೆಯು ಅತ್ಯಲ್ಪ ಮೊತ್ತದ್ದಾಗಿದೆ ಎಂದು ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣ ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ನಗದು ಹರಿವು ಹೆಚ್ಚಿಸುವ ಮೂಲಕ ನಗದು ಬಿಕ್ಕಟ್ಟು ಬಗೆಹರಿಸಲು ಆರ್‌ಬಿಐ ಗವರ್ನರ್‌ ಶುಕ್ರವಾರ ಹಲವು ಕ್ರಮಗಳನ್ನು ಘೋಷಿಸಿದ್ದಾರೆ. ಈ ಬಗ್ಗೆ ಮೊಯಿಲಿ ಕಟುವಾಗಿ ಟೀಕಿಸಿದ್ದಾರೆ.

ADVERTISEMENT

‘ಆರ್‌ಬಿಐ ಗವರ್ನರ್‌ ಅವರು ಪ್ರಕಟಿಸಿರುವ ಎರಡನೇ ಪ್ಯಾಕೇಜ್‌ ಸ್ವಾಗತಾರ್ಹ ನಡೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮೊಲದ ಪ್ಯಾಕೇಜ್‌ನಲ್ಲಿ ಸರ್ಕಾರ ಮತ್ತು ಆರ್‌ಬಿಐ ನೀಡಿರುವ ಕೊಡುಗೆಯು ದೇಶದ ಒಟ್ಟಾರೆ ಜಿಡಿಪಿಯ ಶೇ 1ಕ್ಕಿಂತಲೂ ಕಡಿಮೆಯಾಗಿದೆ. ಎರಡನೇ ಹಂತದ ಪ್ಯಾಕೇಜ್‌ ಜಿಡಿಪಿಯ ಶೇ 0.7ರಷ್ಟಿದೆ. ಆದರೆ ಸದ್ಯದ ಪರಿಸ್ಥಿತಿಗೆ ಜಿಡಿಪಿಯ ಶೇ 9ರಷ್ಟಾದರೂ (₹17.5 ಲಕ್ಷ ಕೋಟಿ) ಅಗತ್ಯ ಇತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಸ್ಥಿತಿಯು ಬೇರೆ ದೇಶಗಳಿಗಿಂತಲೂ ಕಠಿಣವಾಗಿದೆ. ಸದ್ಯದ ಪರಿಸ್ಥಿತಿ ತೀವ್ರತೆಯನ್ನು ಮತ್ತು ಬಿಕ್ಕಟ್ಟನ್ನು ಸರ್ಕಾರ ಹಲವು ಆಯಾಮಗಳಿಂದ ಅರ್ಥ ಮಾಡಿಕೊಳ್ಳಬೇಕು.

‘ಸದ್ಯ ಘೋಷಿಸಿರುವ ಕೊಡುಗೆಯಿಂದ ಆರ್ಥಿಕತೆಯನ್ನು ಮೇಲೆತ್ತುವುದಿರಲಿ ಸ್ಥಿರತೆಗೆ ಬರಲೂ ಸಾಧ್ಯವಾಗುವುದಿಲ್ಲ. ಪರಿಸ್ಥಿತಿಯ ಗಂಭೀರತೆ ಮತ್ತು ಸೂಕ್ಷ್ಮತೆ ಕೊರತೆಯು ಎದ್ದು ಕಾಣುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.