ಇಂದೋರ್ (ಪಿಟಿಐ): ಕಾನೂನುಬಾಹಿರ ಮತಾಂತರ ನಿಷೇಧಿಸಲು ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಕಠಿಣ ಕಾನೂನು ರೂಪಿಸುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಒತ್ತಾಯಿಸಿದೆ.
ಧಾರ್ಮಿಕ ಮೂಲಭೂತವಾದದ ವಿರುದ್ಧ ನಿರ್ಣಯ ಅಂಗೀಕರಿಸಿರುವ ಪರಿಷತ್, ಇದು ವಿಶ್ವದಾದ್ಯಂತ ಭಯೋತ್ಪಾದಕ ದಾಳಿಗಳಿಗೆ ಕಾರಣ ಎಂದು ಹೇಳಿದೆ.
ಭಾನುವಾರ ಮುಕ್ತಾಯವಾದ ವಿಎಚ್ಪಿ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಮತ್ತು ಆಡಳಿತ ಮಂಡಳಿಯ ಮೂರು ದಿನಗಳ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು ಮತ್ತು ಬೇಡಿಕೆಗಳನ್ನು ಸಲ್ಲಿಸಲಾಯಿತು.
‘ಧಾರ್ಮಿಕ ಕಟ್ಟುಪಾಡು- ಅದರ ದುಷ್ಪರಿಣಾಮಗಳು ಮತ್ತು ಪರಿಹಾರ’ ಕುರಿತ ಮಹತ್ವದ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ವಿಎಚ್ಪಿ ಕಾರ್ಯಾಧ್ಯಕ್ಷ, ವಕೀಲ ಅಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
‘ಧಾರ್ಮಿಕ ಕಟ್ಟುಪಾಡುಗಳ ವಿಷಕಾರಿ ಪರಿಣಾಮಗಳನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ಸಮಗ್ರ ನೀತಿ ರೂಪಿಸಬೇಕಾಗಿದೆ. ಈ ಸಂಕುಚಿತ ಮನೋಭಾವ ಮತ್ತು ಪ್ರತ್ಯೇಕತಾವಾದವನ್ನು ಬೌದ್ಧಿಕ, ಸಾಮಾಜಿಕ ಮತ್ತು ರಾಜಕೀಯ ಮಟ್ಟದಲ್ಲಿ ತಟಸ್ಥಗೊಳಿಸಬೇಕಾಗಿದೆ. ಹಿಂಸಾಚಾರ, ಲೂಟಿ, ಅತ್ಯಾಚಾರ ಮತ್ತು ಕೊಲೆಗಳನ್ನು ಜಿಹಾದ್ ಹೆಸರಿನಲ್ಲಿ ಇಸ್ಲಾಂನ ದೊಡ್ಡ ವರ್ಗ ಅಸ್ತ್ರಗಳಾಗಿ ಬಳಸುತ್ತದೆ. ಈಗ ಇದು ಕೆಲಸ ಮಾಡುವುದಿಲ್ಲ’ ಎಂದು ಅವರು ಹೇಳಿದರು.
‘ನನ್ನ ಧರ್ಮ ಮಾತ್ರ ಸರಿ, ಇತರರು ಒಪ್ಪಿಕೊಳ್ಳಬೇಕು ಮತ್ತು ಅವರು ಒಪ್ಪದಿದ್ದರೆ, ಅವುಗಳನ್ನು ತೊಡೆದುಹಾಕಲು ನನಗೆ ದೈವಿಕ ಆಜ್ಞೆ ಇದೆ’ ಎಂಬ ಕೆಲ ಸಂಪ್ರದಾಯವಾದಿಗಳ ಘೋಷಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.
ಜಗತ್ತಿನಲ್ಲಿ ನಿತ್ಯ ಅಲ್ಲಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಿಗೂ ಈ ಮೂಲಭೂತವಾದಿಗಳೇ ಜವಾಬ್ದಾರರು. ‘ಲವ್ ಜಿಹಾದ್’ ಮೂಲಕ ಮುಸ್ಲಿಮೇತರ ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ದೌರ್ಜನ್ಯಗಳು ಮತ್ತು ‘ಸರ್ ತಾನ್ ಸೆ ಜುದಾ ಗ್ಯಾಂಗ್’ನ (ಶಿರಚ್ಛೇದನ ಗ್ಯಾಂಗ್) ಜಿಹಾದಿ ಸಕ್ರಿಯತೆ ಈ ಧಾರ್ಮಿಕ ಮೂಲಭೂತವಾದದ ಘೋರ ಮುಖಗಳಾಗಿವೆ ಎಂದು ವಿಎಚ್ಪಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.