ಕರೂರು ಕಾಲ್ತುಳಿತ ಹಾಗೂ ನಟ ವಿಜಯ್
–ಪಿಟಿಐ ಚಿತ್ರ
ಚೆನ್ನೈ: ಕರೂರು ಕಾಲ್ತುಳಿತ ಘಟನೆಯ ಸಂತ್ರಸ್ತರ ಕುಟುಂಬವನ್ನು ನವೆಂಬರ್ 27ರಂದು ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ನಟ-ರಾಜಕಾರಣಿ ವಿಜಯ್ ಅವರು ಭೇಟಿಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.
ಇದಕ್ಕಾಗಿ ಖಾಸಗಿ ರೆಸಾರ್ಟ್ನ 50 ಕೊಠಡಿಗಳನ್ನು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಕಾಯ್ದಿರಿಸಿದೆ. ಪ್ರತಿ ಸಂತ್ರಸ್ತ ಕುಟುಂಬವನ್ನು ಪ್ರತ್ಯೇಕವಾಗಿ ಭೇಟಿಯಾಗಿ ವಿಜಯ್ ತಮ್ಮ ಸಂತಾಪ ವ್ಯಕ್ತಪಡಿಸಲಿದ್ದಾರೆ.
‘ನಾವು ಸ್ಥಳಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಿದ್ದಾರೆ. ನಾವು ಅನೇಕ ಮಂದಿ ಹೋಗುವವರಿದ್ದೇವೆ’ ಎಂದು ಸಂತ್ರಸ್ತ ಕುಟುಂಬದ ಸದಸ್ಯೆಯೊಬ್ಬರು ಕರೂರಿನಲ್ಲಿ ಪತ್ರಕರ್ತರಿಗೆ ಹೇಳಿದ್ದಾರೆ.
ಸೆಪ್ಟೆಂಬರ್ 27ರಂದು ನಡೆದ ವಿಜಯ್ ಅವರ ಟಿವಿಕೆ ಸಭೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದಾರೆ. 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಪ್ರಸ್ತಾಪಿತ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯ್ ಅವರು ಕರೂರಿನಲ್ಲಿಯೇ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಬಹುದಿತ್ತು. ಅವರಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಮಾಡಿರುವುದು ಸರಿ ಅಲ್ಲ ಎಂದು ಕೆಲವರು ಟೀಕಿಸಿದ್ದಾರೆ.
ಆದರೆ, ಕರೂರಿಗೆ ಭೇಟಿ ನೀಡಲು ವಿಜಯ್ ಅವರಿಗೆ ಅಧಿಕಾರಿಗಳಿಂದ ಅನುಮತಿ ನಿರಾಕರಿಸಿದ್ದರಿಂದ ಹೊಸ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷವು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.