ಹಾಪುರ: ಉತ್ತರ ಪ್ರದೇಶದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಎಸ್ಯುವಿ ವಾಹನವನ್ನು ರೈತರ ತರಕಾರಿ ಮೇಲೆ ಓಡಾಡಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಖಂಡನೆಗೆ ಒಳಗಾಗಿದೆ.
ಹಾಪುರ ಜಿಲ್ಲೆಯ ರಾಜ್ಯ ಸರ್ಕಾರಿ ಸ್ವಾಮ್ಯದ ಮಾರುಕಟ್ಟೆಯಲ್ಲಿ ಅನುಮತಿಯಿಲ್ಲದೆ ರೈತರು ತರಕಾರಿ ಮಾರಲು ಕುಳಿತ್ತಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ತರಕಾರಿಯನ್ನು ಪುಡಿ ಪುಡಿ ಮಾಡಿದ್ದಾರೆ.
ಮೊಬೈಲ್ನಲ್ಲಿ ಸರೆಯಾಗಿರುವ ವಿಡಿಯೊದಲ್ಲಿ, ಮಾರುಕಟ್ಟೆಯ ಕಾರ್ಯದರ್ಶಿ ಸುಶೀಲ್ ಕುಮಾರ್ ಎಂಬ ಅಧಿಕಾರಿಯ ವಾಹನವನ್ನು ಹಲವು ಬಾರಿ ಹಿಂದೆ ಮುಂದೆ ಚಲಿಸುತ್ತಾ ರೈತರ ತರಕಾರಿಗಳನ್ನು ನಾಶಮಾಡಿದೆ. ಕೆಲವರು ಪ್ಲಾಸ್ಟಿಕ್ ಬಾಸ್ಕೆಟ್ಸ್ಗಳನ್ನು ತೆಗೆಯುತ್ತಿದ್ದರೆ, ಕೆಲ ಸರ್ಕಾರಿ ಅಧಿಕಾರಿಗಳು ನೋಡುತ್ತಾ ನಿಂತಿದ್ದರು. ಕುಮಾರ್ ಅವರ ಚಾಲಕ ಕಾರನ್ನು ಹಿಂದೆ ಮುಂದೆ ಚಲಿಸಿ ತರಕಾರಿಗಳನ್ನು ನಾಶಮಾಡಿದ್ದಾನೆ ಎನ್ನುತ್ತಾರೆ ಕೆಲ ಸ್ಥಳೀಯರು.
ಒತ್ತುವರಿ ಮಾಡಿಕೊಳ್ಳುವವರ ವಿರುದ್ಧದ ಕಾರ್ಯಾಚರಣೆಗೆಂದೇ ಶನಿವಾರ ಮುಂಜಾನೆ ಅಧಿಕಾರಿ ತೆರಳಿದ್ದರು. ಘಟನೆಗೆ ಸಂಬಂಧಿಸಿದಂತೆ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಅವರು, ರಸ್ತೆ ಮತ್ತು ಬದಿಗಳಲ್ಲಿ ಕುಳಿತುಕೊಳ್ಳಬೇಡಿ. ಬದಲಿಗೆ ಅಂಗಡಿಗಳಲ್ಲೇ ಕುಳಿತು ತರಕಾರಿ ಮಾರಿಕೊಳ್ಳಿ. ಯಾರಿಗೆ ಅಂಗಡಿ ಇಲ್ಲವೋ ಅಂತವರು ಪರವಾನಗಿಗೆ ಅರ್ಜಿ ಸಲ್ಲಿಸಿ ಮತ್ತು ನಾವು ಅದನ್ನು ಮಾಡಿಕೊಡುತ್ತೇವೆ ಎಂದು ಹಲವು ಬಾರಿ ಹೇಳಿದ್ದೆವು ಎಂದು ಅಧಿಕಾರಿ ತಿಳಿಸಿದ್ದಾರೆ.
ನಾನು ವಿಡಿಯೊವನ್ನು ನೋಡಿದ್ದೇನೆ. ಚಾಲಕನನ್ನು ಖಂಡಿಸಿದ್ದೇನೆ. ರಸ್ತೆಯಲ್ಲಿ ಕುಳಿತಿರುವ ಅಥವಾ ಏನಾದರೂ ತೊಂದರೆ ಉಂಟಾದರೆ ನನಗೆ ತಿಳಿಸುವಂತೆ ಆತನಿಗೆ ಹೇಳಿದ್ದೆ ಎಂದು ಹೇಳಿದರು.
ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ಒತ್ತುವರಿ ವಿರೋಧಿ ಕಾರ್ಯಾಚರಣೆ ಕೈಗೊಳ್ಳುವುದು ಸಾಮಾನ್ಯ. ಆದರೆ ರೈತರು ಮಾರುಕಟ್ಟೆಗೆಂದು ತಂದ ತರಕಾರಿಗಳನ್ನು ಪುಡಿ ಮಾಡಿ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಟ್ವೀಟಿಗರುಬಳಕೆದಾರರು ಖಂಡನೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.