ADVERTISEMENT

ಗೋವಾ ಒಳಿತಿಗಾಗಿ ಎಎಪಿಗೆ ಮತ ನೀಡಿ: ರಾಜಕೀಯ ಪಕ್ಷಗಳಿಗೆ ಕೇಜ್ರಿವಾಲ್ ಕರೆ

ಪಿಟಿಐ
Published 3 ಫೆಬ್ರುವರಿ 2022, 9:51 IST
Last Updated 3 ಫೆಬ್ರುವರಿ 2022, 9:51 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್    

ಪಣಜಿ: ಗೋವಾದ ಒಳಿತಿಗಾಗಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಬೆಂಬಲಿಗರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಮತ ಚಲಾಯಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಮನವಿ ಮಾಡಿದ್ದಾರೆ.

ಗೋವಾದ ಹಿತದೃಷ್ಟಿಯಿಂದ ತಮ್ಮ ಪಕ್ಷವನ್ನು ಬದಲಾಯಿಸದೆ ಎಎಪಿಗೆ ಮತ ಹಾಕಬಹುದು ಎಂದವರು ವಿನಂತಿಸಿದರು.

ಗೋವಾದಲ್ಲಿ ವಿಧಾನಸಭೆ ಚುನಾವಣೆಯು ಫೆಬ್ರುವರಿ 14ರಂದು ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.

ಗೋವಾ ವಿಧಾನಸಭೆಯ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿರುವ ಎಎಪಿ, ರಾಜಕೀಯ ಬದಲಾವಣೆಯನ್ನು ಎದುರು ನೋಡುತ್ತಿದೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಇತರೆ ಎಲ್ಲ ರಾಜಕೀಯ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲು ನಾನು ಇಲ್ಲಿದ್ದೇನೆ. ನಾನು ಅವರನ್ನು ಎಎಪಿ ಪಕ್ಷಕ್ಕೆ ಸೇರುವಂತೆ ಹೇಳುತ್ತಿಲ್ಲ. ನೀವು ನಿಮ್ಮ ಪಕ್ಷದಲ್ಲೇ ಉಳಿಯಬಹುದು. ಆದರೆ ಗೋವಾದ ಒಳಿತಿಗಾಗಿ, ನಿಮ್ಮ ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಎಎಪಿಗೆ ಮತ ನೀಡಿ ಎಂದು ವಿನಂತಿ ಮಾಡಿದರು.

ಕಳೆದ 15 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ರಾಜ್ಯದ ಜನತೆಗೆ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಈ ಬಾರಿ ಎಎಪಿಗೆ ಮತ ನೀಡಿ. ರಾಜ್ಯದಲ್ಲಿ ನೀವು ಬದಲಾವಣೆಯನ್ನು ನೋಡಲಿದ್ದೀರಿ ಎಂದು ಹೇಳಿದರು.

ಕಾಂಗ್ರೆಸ್ ಹಲವಾರು ವರ್ಷಗಳಿಂದ ಗೋವಾದಲ್ಲಿ ಆಡಳಿತ ನಡೆಸಿದೆ. ಆದರೆ ಜನರು ನಾಯಕರಾಗಲು ಕಾಂಗ್ರೆಸ್ ಸೇರುತ್ತಾರೆ. ಬಳಿಕ ಬಿಜೆಪಿಗೆ ಪಕ್ಷಾಂತರಗೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ಗೆ ಯಾವುದೇ ಸಿದ್ಧಾಂತವಿಲ್ಲ. ಹಾಗೆಯೇ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಹಾಗೂ ಗೋವಾ ಫಾರ್ವರ್ಡ್ ಪಕ್ಷ (ಜಿಎಫ್‌ಪಿ) ರಾಜ್ಯದಲ್ಲಿ ಸರ್ಕಾರ ರಚಿಸುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇಂತಹ ಪಕ್ಷಕ್ಕೆ ಮತ ನೀಡಿ ಏನು ಪ್ರಯೋಜನ? ಮತಗಳು ವಿಭಜನೆಯಾಗಲು ಅವಕಾಶ ನೀಡಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.