ADVERTISEMENT

ದೇಶದ ಘನತೆಗೆ ಧಕ್ಕೆಯಾಗುವುದನ್ನು ಸಹಿಸೆವು: ರಾಜನಾಥ್‌ ಸಿಂಗ್‌

ಗಡಿ ವಿವಾದ: ಚೀನಾಕ್ಕೆ ಸ್ಪಷ್ಟ ಸಂದೇಶ ರವಾನೆ

ಪಿಟಿಐ
Published 19 ಡಿಸೆಂಬರ್ 2020, 7:31 IST
Last Updated 19 ಡಿಸೆಂಬರ್ 2020, 7:31 IST
ಹೈದರಬಾದ್‌ ಸಮೀಪದ ದುಂಡಿಗಲ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಗೌರವ ವಂದನೆ ಸ್ವೀಕರಿಸಿದರು  – ಪಿಟಿಐ ಚಿತ್ರ
ಹೈದರಬಾದ್‌ ಸಮೀಪದ ದುಂಡಿಗಲ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಗೌರವ ವಂದನೆ ಸ್ವೀಕರಿಸಿದರು  – ಪಿಟಿಐ ಚಿತ್ರ   

ಹೈದರಾಬಾದ್‌: ಚೀನಾದೊಂದಿಗಿನ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಭಾರತ ಬಯಸುತ್ತದೆ. ಆದರೆ, ದೇಶದ ಘನತೆ–ಗೌರವಕ್ಕೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ದುಂಡಿಗಲ್‌ ವಾಯುನೆಲೆಯಲ್ಲಿ ಶನಿವಾರ ನಡೆದ ಪದವಿ ಪ್ರದಾನ ಹಾಗೂ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷವನ್ನು ಶಮನಗೊಳಿಸಲು ಭಾರತ ಮತ್ತು ಚೀನಾ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿರುವ ಮಧ್ಯೆಯೇ ಸಚಿವ ರಾಜನಾಥ್‌ ಸಿಂಗ್‌ ಅವರು ಚೀನಾಕ್ಕೆ ಮತ್ತೊಮ್ಮೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ADVERTISEMENT

‘ಲಡಾಖ್‌ನ ಪೂರ್ವಗಡಿಯಲ್ಲಿ ಉದ್ಭವಿಸಿರುವ ಸಂಘರ್ಷಮಯ ಸ್ಥಿತಿಯನ್ನು ಭಾರತ ಸಮರ್ಥವಾಗಿ ನಿಭಾಯಿಸಿದೆ. ತಾನು ದುರ್ಬಲ ರಾಷ್ಟ್ರವಲ್ಲ. ಯಾವುದೇ ಉದ್ವಿಗ್ನ ಸ್ಥಿತಿ, ಉಲ್ಲಂಘನೆ ಅಥವಾ ಏಕಪಕ್ಷೀಯ ಕ್ರಮಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥ ಎಂಬುದನ್ನು ಸಹ ಭಾರತ ಸಾಬೀತುಪಡಿಸಿದೆ’ ಎಂದರು.

‘ಗಡಿಯಲ್ಲಿನ ಸಂಘರ್ಷವನ್ನು ಶಮನಗೊಳಿಸಲು ಭಾರತ ಕೈಗೊಂಡ ಕ್ರಮಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೆಲವು ದೇಶಗಳಿಂದ ಬೆಂಬಲವೂ ದೊರೆತಿದೆ’ ಎಂದರು.

‘ನಮಗೆ ಸಂಘರ್ಷ ಬೇಡ, ಶಾಂತಿ ಬೇಕು. ಆದರೆ, ದೇಶದ ಸ್ವಾಭಿಮಾನ, ಘನತೆಗೆ ಚ್ಯುತಿ ಬರುವುದನ್ನು ಸಹಿಸೆವು’ ಎಂದು ಅವರು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.