ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಗುರುವಾರ ನಡೆಯಲಿದೆ.
ಸುಪ್ರೀಂ ಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ. ಅಗಸ್ಟಿನ್ ಜಾರ್ಜ್ ಮಾಸಿ ವಿಚಾರಣೆ ನಡೆಸಲಿದ್ದಾರೆ.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿದ್ದ ಪೀಠವು ಈ ಮೊದಲು ಇದರ ವಿಚಾರಣೆ ನಡೆಸುತ್ತಿತ್ತು. ಮೇ 13ರಂದು ಅವರು ನಿವೃತ್ತಿಯಾದರು.
ಸೂಕ್ತ ಚರ್ಚೆಯೊಂದಿಗೆ ಸಂಸತ್ತು ಮಸೂದೆಯನ್ನು ಅಂಗೀಕರಿಸಿದೆ. ಹೀಗಾಗಿ ಸರ್ಕಾರದ ಅಭಿಪ್ರಾಯ ಕೇಳದೆ ತಡೆ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳದ ನಂತರ ಏ. 17ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ವಕ್ಫ್ ಆಸ್ತಿಯನ್ನು ಡಿನೋಟಿಫೈ ಮಾಡುವುದಿಲ್ಲ ಎಂಬ ಕೇಂದ್ರದ ಭರವಸೆಯನ್ನು ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿತು. ಮೇ 5ರವರೆಗೆ ಕೇಂದ್ರ ವಕ್ಫ್ ಸಮಿತಿಗೆ ಸದಸ್ಯರ ನೇಮಕಾತಿ ಮಾಡುವುದಿಲ್ಲ ಎಂದೂ ಕೇಂದ್ರ ಹೇಳಿತ್ತು.
ಏ. 25ರಂದು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯವು 2025ರ ವಕ್ಫ್ ಖಾತೆ ಕುರಿತು 1,332 ಪುಟಗಳ ಪ್ರಾಥಮಿಕ ಅಫಿಡವಿಟ್ ಅನ್ನು ಸಲ್ಲಿಸಿತು. ಒಂದೊಮ್ಮೆ ಅರ್ಜಿಗಳನ್ನು ಪುರಸ್ಕರಿಸಿ ಕಾಯ್ದೆಗೆ ತಡೆ ನೀಡಿದ್ದೇ ಆದಲ್ಲಿ, ಸಾಂವಿಧಾನಿಕ ಪ್ರಕ್ರಿಯೆ ಮೂಲಕ ಕೇಂದ್ರ ಸರ್ಕಾರ ಅಂಗೀಕರಿಸಿದ ಕಾಯ್ದೆಯ ಕುರಿತು ನ್ಯಾಯಾಲಯ ಊಹೆಯನ್ನು ಆಧರಿಸಿದೆ ಎಂದರ್ಥ ಎಂದಿತ್ತು. ಜತೆಗೆ 2013ರಿಂದ ಇಲ್ಲಿಯವರೆಗೆ ವಕ್ಫ್ ಆಸ್ತಿಯು ಶೇ 116ರಷ್ಟು ಹೆಚ್ಚಳವಾಗಿದೆ ಎಂದು ನ್ಯಾಯಾಲಯಕ್ಕೆ ಕೇಂದ್ರ ಮನವರಿಕೆ ಮಾಡಿಕೊಟ್ಟಿತ್ತು.
ವಕ್ಫ್ ತಿದ್ದುಪಡಿ ಕಾಯ್ದೆ 2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏ. 5ರಂದು ಅಂಕಿತ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.