ADVERTISEMENT

ಬರಿದಾಗುತ್ತಿವೆ ದೇಶದ ಜಲಾಶಯಗಳು: 150 ಜಲಾಶಯಗಳಲ್ಲಿ ಶೇ 38ರಷ್ಟು ನೀರು ಲಭ್ಯ

ಪಿಟಿಐ
Published 23 ಮಾರ್ಚ್ 2024, 0:10 IST
Last Updated 23 ಮಾರ್ಚ್ 2024, 0:10 IST
.
.   

ನವದೆಹಲಿ: ಬೇಸಿಗೆ ಕಾಲದ ಆರಂಭದಲ್ಲೇ ಎಲ್ಲೆಡೆ ನೀರಿನ ಅಭಾವ ಉಂಟಾಗಿದೆ. ದೇಶದಲ್ಲಿರುವ 150 ಪ್ರಮುಖ ಜಲಾಶಯಗಳಲ್ಲಿ ಅವುಗಳ ಗರಿಷ್ಠ ಸಂಗ್ರಹ ಸಾಮರ್ಥ್ಯದ ಶೇ 38ರಷ್ಟು ನೀರು ಮಾತ್ರ ಲಭ್ಯವಿದೆ. ಇದು, ಕಳೆದ ದಶಕದಲ್ಲಿ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ ಇದ್ದ ನೀರಿನ ಸರಾಸರಿ ಪ್ರಮಾಣಕ್ಕಿಂತಲೂ ಕಡಿಮೆ ಎಂದು ಅಂಕಿ–ಅಂಶಗಳು ಹೇಳುತ್ತಿವೆ.

ಉದ್ಯಾನನಗರಿ ಬೆಂಗಳೂರಿನಲ್ಲಿ ನಿತ್ಯ ಸುಮಾರು 500 ದಶಲಕ್ಷ ಲೀಟರ್‌ (ಎಂಎಲ್‌ಡಿ) ನೀರಿನ ಅಭಾವ ಉಂಟಾಗುತ್ತಿದೆ. ಇಲ್ಲಿ ದಿನವೊಂದಕ್ಕೆ 2,600 ದಶಲಕ್ಷ ಲೀಟರ್‌ ನೀರಿನ ಬೇಡಿಕೆ ಇದೆ.‌ ಇಲ್ಲಿರುವ 14,000 ಕೊಳವೆಬಾವಿಗಳ ಪೈಕಿ 6,900 ಈಗಾಗಲೇ ಬತ್ತಿ ಹೋಗಿವೆ. ಜಲಕಾಯಗಳು ಅತಿಕ್ರಮಣಕ್ಕೆ ಒಳಗಾಗಿವೆ ಅಥವಾ ಬತ್ತಿ ಹೋಗಿವೆ.

‘ನಗರಕ್ಕೆ ಅಗತ್ಯವಿರುವ ನೀರಿನ ಪೈಕಿ 1,470 ಎಂಎಲ್‌ಡಿ ನೀರನ್ನು ಕಾವೇರಿ ನದಿ ಮೂಲಕ ಮತ್ತು 650 ಎಂಎಲ್‌ಡಿ ನೀರನ್ನು ಕೊಳವೆ ಬಾವಿ ಮೂಲಕ ಪೂರೈಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ನೀರಿನ ಸಂಗ್ರಹಣಾ ಮಟ್ಟ ಕುಸಿದಿದೆ ಎಂದು ಕೇಂದ್ರೀಯ ಜಲ ಆಯೋಗವು ತನ್ನ ವಾರದ ಬುಲೆಟಿನ್‌ನಲ್ಲಿ ತಿಳಿಸಿದೆ.

ಹಿಮಾಚಲ ಪ್ರದೇಶ, ಪಂಜಾಬ್‌, ಮಧ್ಯಪ್ರದೇಶ, ತ್ರಿಪುರಾ, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್‌, ಛತ್ತೀಸಗಢ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹಣಾ ಮಟ್ಟ ಕುಸಿದಿದೆ ಎಂದು ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.