ಲಖನೌ: ಪತಿಯ ಸಾವಿನ ಬಳಿಕ ಅವರಿಗೆ ಸಿದ್ಧಪಡಿಸಲಾದ ಚಿತೆ ಏರಿ, (ಸತಿ ಪದ್ಧತಿ ಪ್ರಕಾರ) ಜೀವನ ಅಂತ್ಯಗೊಳಿಸಲು ಮುಂದಾದ ಘಟನೆ ಉತ್ತರಪ್ರದೇಶದ ಮೈನ್ಪುರಿಯಲ್ಲಿ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಜ್ಜಿಯನ್ನು ಚಿತೆಯಿಂದ ಎಳೆದು ಬದುಕಿಸಿದ್ದಾರೆ.
ಇಲ್ಲಿನ ಅಂಗಾವುತಾ ಗ್ರಾಮದ 80 ವರ್ಷದ ಗೋರೆಲಾಲ್ ಶಕ್ಯಾ ಎಂಬುವರು ಅನಾರೋಗ್ಯದಿಂದ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದರು. ಸೋಮವಾರ ಅಂತ್ಯಸಂಸ್ಕಾರ ನಿಗದಿಯಾಗಿತ್ತು.
ಈ ವೇಳೆ ಶಕ್ಯಾ ಅವರ ಪತ್ನಿ 75 ವರ್ಷದ ಲೌಂಗ್ಶ್ರೀ ದೇವಿ ಅವರು ಸತಿ ಪದ್ಧತಿಯಂತೆಯೇ, ಪತಿಯ ಮೃತದೇಹವಿಟ್ಟಿದ್ದ ಚಿತೆ ಏರಿ ಕೂತಿದ್ದರು. ಇದಕ್ಕೂ ಮುನ್ನ, ಕೆಲವು ಮಹಿಳೆಯರು ಆಕೆಯ ಹಣೆಗೆ ತಿಲಕವನ್ನಿಟ್ಟಿದ್ದರು.
ವಿಚಿತ್ರವೆಂದರೆ, ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ, ಅಲ್ಲಿದ್ದ ಗ್ರಾಮಸ್ಥರು , ಆಕೆಯ ಮಕ್ಕಳು ಕೂಡ ತಡೆಯಲು ಮುಂದಾಗಲಿಲ್ಲ. ಮೂಲಗಳ ಪ್ರಕಾರ, ಈ ವಿಷಯ ತಿಳಿದ ಸ್ಥಳೀಯರೊಬ್ಬರು ಪೊಲೀಸರಿಗೆ ದೂರವಾಣಿ ಕರೆಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಹಿಳೆಯನ್ನು ಚಿತೆಯಿಂದ ಕೆಳಗಿಳಿಸಿ ರಕ್ಷಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ‘ಒಂದೊಮ್ಮೆ ಮಹಿಳೆಯನ್ನು ಬಲವಂತವಾಗಿ ಚಿತೆಮೇಲೆ ಕೂರಿಸಿದ್ದರೆ, ತಪ್ಪಿತಸ್ಥರನ್ನು ಬಂಧಿಸಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.