
ತಿರುವನಂತಪುರ: ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಡಿ ಸುಮಾರು 300 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಫೆಬ್ರುವರಿಯಲ್ಲಿ ಮನೆಗಳನ್ನು ಹಸ್ತಾಂತರಿಸುವ ಗುರಿ ಹೊಂದಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರವಾರ ತಿಳಿಸಿದರು.
ಇಲ್ಲಿನ ಮುಂಡಕ್ಕೈ ಮತ್ತು ಚೂರಲ್ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಹಾನಿಗೊಳಗಾದ ಕುಟುಂಬಗಳಿಗೆ ಕಲ್ಪೆಟ್ಟ ಬೈಪಾಸ್ ಬಳಿಯ ಎಲ್ಸ್ಟನ್ ಎಸ್ಟೇಟ್ ಪ್ರದೇಶದಲ್ಲಿ ‘ಟೌನ್ಶಿಪ್’ ನಿರ್ಮಿಸಲಾಗುತ್ತಿದೆ. ಅದರ ಭಾಗವಾಗಿ ಈ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಯೋಜನೆಯು ತ್ವರಿತವಾಗಿ ಸಾಗುತ್ತಿದ್ದು, ಸುರಕ್ಷತೆ, ಗುಣಮಟ್ಟ ಮತ್ತು ದೀರ್ಘಕಾಲೀನ ಸುಸ್ಥಿರತೆಗೆ ಒತ್ತು ನೀಡಲಾಗಿದೆ. ಈ ಟೌನ್ಶಿಪ್ನಲ್ಲಿ 410 ಮನೆಗಳು ಬರಲಿದ್ದು, ಗೌರವಯುತ ಜೀವನ ನಡೆಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.
‘ಇಲ್ಲಿ ನಾವು ಸಂತ್ರಸ್ತರಿಗೆ ಸೂರು ಒದಗಿಸುವುದರ ಜತೆಗೆ, ವಿಪತ್ತಿನಿಂದ ಛಿದ್ರಗೊಂಡವರ ಬದುಕನ್ನು ಪುನರ್ ನಿರ್ಮಿಸುವ ಕಾರ್ಯ ನಡೆಸುತ್ತಿದ್ದೇವೆ’ ಎಂದು ಪಿಣರಾಯಿ ವಿಜಯನ್ ಹೇಳಿದರು.
‘ಲೈಫ್ ಮಿಷನ್’ ಮೂಲಕ ಇಲ್ಲಿಯವರೆಗೆ 4,76,076 ಮನೆಗೆಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ. ಅನೇಕ ಕುಟುಂಬಗಳು ಸುರಕ್ಷಿತ ಮನೆಗಳಿಗೆ ಸ್ಥಳಾಂತರಗೊಂಡಿವೆ. ಫೆಬ್ರುವರಿಯಲ್ಲಿ ಈ ಸಂಖ್ಯೆ ಐದು ಲಕ್ಷ ತಲುಪಲಿದೆ. ಅಲ್ಲದೆ 1,24, 471 ಮನೆಗಳ ನಿರ್ಮಾಣ ಕಾರ್ಯವು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ ಎಂದು ಅವರು ಅಂಕಿ ಅಂಶ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.