ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ವ್ಹೀಲ್‌ಚೇರ್‌ನಲ್ಲಿಯೇ ಸಿಎಂ ಮಮತಾ ಬ್ಯಾನರ್ಜಿ ರೋಡ್‌ಶೋ

ಏಜೆನ್ಸೀಸ್
Published 14 ಮಾರ್ಚ್ 2021, 3:40 IST
Last Updated 14 ಮಾರ್ಚ್ 2021, 3:40 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಗಾಯಗೊಂಡ ಕೆಲವು ದಿನಗಳ ನಂತರ ಗಾಂಧಿ ಮೂರ್ತಿಯಿಂದ ಹಜ್ರಾಕ್ಕೆ ಗಾಲಿಕುರ್ಚಿಯಲ್ಲಿ ಭಾನುವಾರ ರೋಡ್ ಶೋ ನಡೆಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲಗಳು ತಿಳಿಸಿವೆ.

ಅವರು ಇಂದು ಮಧ್ಯಾಹ್ನ ಹಜ್ರಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವಾರದ ಆರಂಭದಲ್ಲಿ ಚುನಾವಣೆ ಪ್ರಚಾರದ ವೇಳೆ ಗಾಯಗೊಂಡಿದ್ದರು. ಅದಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾಮಪತ್ರ ಸಲ್ಲಿಸಿರುವ ನಂದಿಗ್ರಾಮಕ್ಕೆ ಮಾರ್ಚ್ 10ರಂದು ಎರಡು ದಿನಗಳ ಭೇಟಿಯಲ್ಲಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ಕೆಲವು ಅಪರಿಚಿತ ಜನರು ತಳ್ಳಿದ್ದರು. ಇದರಿಂದಾಗಿ ನಂದಿಗ್ರಾಮದ ರಸ್ತೆ ಮೂಲಕ ಕೋಲ್ಕತ್ತಾದ ಎಸ್ಎಸ್‌ಕೆಎಂ ಆಸ್ಪತ್ರೆಗೆ ಕರೆತರಲಾಗಿತ್ತು.

ADVERTISEMENT

ಆರಂಭಿಕ ವೈದ್ಯಕೀಯ ಪರೀಕ್ಷೆಯ ವರದಿಯ ಪ್ರಕಾರ, ಬ್ಯಾನರ್ಜಿ ಅವರ ಎಡ ಕಾಲು ಮತ್ತು ಪಾದದ ಮೇಲಿನ ಮೂಳೆಗಳಿಗೆ ತೀವ್ರವಾಗಿ ಗಾಯವಾಗಿತ್ತು ಮತ್ತು ಆಕೆಯ ಭುಜ, ಮುಂದೋಳು ಮತ್ತು ಕತ್ತಿನ ಮೇಲೆ ಮೂಗೇಟುಗಳು ಮತ್ತು ಗಾಯಗಳಾಗಿದ್ದವು. ಚಿಕಿತ್ಸೆಯ ಬಳಿಕ ಮಾರ್ಚ್ 12 ರಂದು ಮುಖ್ಯಮಂತ್ರಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಬಳಿಕ ಹೇಳಿಕೆ ಕೊಟ್ಟಿರುವ ಮಮತಾ ಬ್ಯಾನರ್ಜಿ, ಬೆಂಬಲಿಗರಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಿದ್ದರು. ಅಲ್ಲದೆ ಒಂದೆರಡು ದಿನಗಳಲ್ಲಿ ಪ್ರಚಾರಕ್ಕೆ ಹಿಂತಿರುಗಲಿದ್ದು, ಅಗತ್ಯವಿದ್ದರೆ ವೀಲ್ ಚೇರ್ ಬಳಕೆ ಮಾಡುವುದಾಗಿ ಘೋಷಿಸಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ದಾಳಿಯು ಟಿಎಂಸಿ ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಜಟಾಪಟಿಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.