ನವದೆಹಲಿ: ಗಲಭೆ ಪೀಡಿತ ಜಹಾಂಗಿರ್ಪುರಿಯಲ್ಲಿ ಹಲವು ಕಟ್ಟಡಗಳನ್ನು ನೆಲಸಮಗೊಳಿಸಿರುವ ಸ್ಥಳೀಯ ಪಾಲಿಕೆಯ ತೆರವು ಕಾರ್ಯಾಚರಣೆ ವಿರುದ್ಧ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಕಿಡಿಕಾರಿದ್ದಾರೆ.
‘ಕಾನೂನು ಸುವ್ಯವಸ್ಥೆಯು ಪ್ರತಿದಿನವೂ ಕುಸಿಯುವುದನ್ನು ನಾವು ನೋಡುತ್ತಿದ್ದೇವೆ. ಶೀಘ್ರದಲ್ಲೇ ದೇಶದಲ್ಲಿ ಯಾವುದೇ ಕಾನೂನು, ಯಾವುದೇ ನಿಯಮಗಳಿರುವುದಿಲ್ಲ’ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಆಡಳಿತದ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್ಡಿಎಂಸಿ) ಅತಿಕ್ರಮಣ ತೆರವು ಕಾರ್ಯಾಚರಣೆಯ ಭಾಗವಾಗಿ ಬುಧವಾರ ಬೆಳಿಗ್ಗೆ ಮಸೀದಿಯ ಸಮೀಪವಿರುವ ಹಲವಾರು ಕಾಂಕ್ರೀಟ್ ಕಟ್ಟಡಗಳು ಮತ್ತು ತಾತ್ಕಾಲಿಕ ಶೆಡ್ಗಳನ್ನು ನೆಲಸಮಗೊಳಿಸಲಾಯಿತು.
ಕಾರ್ಯಾಚರಣೆ ವಿರುದ್ಧ ಜಮಿಯತ್ ಉಲೇಮಾ-ಎ-ಹಿಂದ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೆರವು ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿತ್ತು.
‘ಒಮ್ಮೆ ನಿರಂಕುಶ ಆದೇಶಗಳು ಕಾನೂನನ್ನು ಅತಿಕ್ರಮಿಸಿದರೆ, ನಾವು ನರಕದ ಹಾದಿಯಲ್ಲಿರುತ್ತೇವೆ. ಬುಲ್ಡೋಜರ್ ಅನಿಯಂತ್ರಿತ ಆದೇಶವನ್ನು ಪ್ರತಿನಿಧಿಸುತ್ತದೆ. ಸುಪ್ರೀಂ ಕೋರ್ಟ್ 'ಕಾನೂನು' ಪ್ರತಿನಿಧಿಸುತ್ತದೆ. ನಿನ್ನೆ, ಬುಲ್ಡೋಜರ್ ಕಾನೂನನ್ನು ಧಿಕ್ಕರಿಸಿರುವುದನ್ನು ನಾವು ನೋಡಿದ್ದೇವೆ. ಇಂದು ಏನಾಗುತ್ತದೆ ಎಂಬುದನ್ನು ನೋಡೋಣ’ ಎಂದು ಮಾಜಿ ಗೃಹ ಸಚಿವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.