ADVERTISEMENT

ಬಂಗಾಳದಲ್ಲಿ BLO ಸಾವು: ಎಸ್‌ಐಆರ್‌ ಕೆಲಸದ ಒತ್ತಡದಿಂದಲೇ ಸಾವು; ಕುಟುಂಬಸ್ಥರ ಆರೋಪ

ಪಿಟಿಐ
Published 6 ಫೆಬ್ರುವರಿ 2026, 16:25 IST
Last Updated 6 ಫೆಬ್ರುವರಿ 2026, 16:25 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಮತಗಟ್ಟೆ ಅಧಿಕಾರಿಯೊಬ್ಬರು (ಬಿಎಲ್‌ಒ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಟಿಎಂಸಿ ಆರೋಪಕ್ಕೆ ಈ ಘಟನೆಯು ಮತ್ತಷ್ಟು ಇಂಬು ನೀಡಿದ್ದು, ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ. 

ಮೃತ ಮಾಯಾ ಮುಖ್ಯೋಪಾಧ್ಯಾಯ (58) ಅವರು ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಇತ್ತೀಚೆಗೆ ಅವರನ್ನು ಮತಗಟ್ಟೆ ಸಂಖ್ಯೆ 251ಕ್ಕೆ ಬಿಎಲ್‌ಒ ಆಗಿ ನೇಮಿಸಲಾಗಿತ್ತು. ಗುರುವಾರ ರಾತ್ರಿ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಕೊಂಡೊಯ್ದ ಬಳಿಕ ಮಾಯಾ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಶಾಸಕ ನಿಯಾಮತ್‌ ಶೇಖ್‌ ಅವರು, ‘ಎಸ್‌ಐಆರ್‌ ಪ್ರಕ್ರಿಯೆಯು ಬಿಎಲ್‌ಒಗಳಲ್ಲಿ ಭೀತಿ ಹುಟ್ಟುಹಾಕಿದೆ.  ಕೆಲಸದ ಒತ್ತಡವನ್ನು ತಡೆಯಲಾಗುತ್ತಿಲ್ಲ ಎಂದು ಹಲವು ಬಿಎಲ್‌ಒಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಸಿಪಿಎಂನ ಮಾಜಿ ಶಾಸಕ ಅಲಿ ವಿಶ್ವಾಸ್‌ ಅವರು, ‘ಎಸ್‌ಐಆರ್‌ ಹೆಸರಿನಲ್ಲಿ ಬಿಎಲ್‌ಒಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.

ವೈಯಕ್ತಿಕ ಅನಾರೋಗ್ಯದಿಂದ ಮೃತಪಟ್ಟಿರುವ ಪ್ರಕರಣವನ್ನು ರಾಜ್ಯ ಸರ್ಕಾರವು ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಮಧ್ಯೆ ಮಾಯಾ ಅವರ ಕುಟುಂಬಸ್ಥರು, ‘ಬಿಎಲ್‌ಒ ಆಗಿ ನೇಮಕವಾದ ಬಳಿಕ ಮಾಯಾ ಅವರು ಒತ್ತಡದಲ್ಲಿದ್ದರು. ಪರಿಷ್ಕರಣೆ ಪ್ರಕ್ರಿಯೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಯಾವುದಾದರೂ ಹೆಸರು ಬಿಟ್ಟುಹೋದರೆ/ ತೆಗೆದುಹಾಕಿದರೆ ಗ್ರಾಮಸ್ಥರಿಂದ ವಿರೋಧ ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿದ್ದರು’ ಎಂದು  ಆರೋಪಿಸಿದ್ದಾರೆ.

‘ಅವರ ನೇತೃತ್ವದ ಮತಗಟ್ಟೆಯಲ್ಲಿ ಅಂದಾಜು 830 ಮತದಾರರಿದ್ದರು. ಈ ಪೈಕಿ 320 ಜನರಿಗೆ ಎಸ್ಐಆರ್‌ ಪ್ರಕ್ರಿಯೆಯ ಭಾಗವಾಗಿ ನೋಟಿಸ್‌ ರವಾನಿಸಲಾಗಿತ್ತು. ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಇಲ್ಲದಿದ್ದರೆ ಗ್ರಾಮಸ್ಥರು ಮನೆಯ ಮೇಲೆ ದಾಳಿ ಮಾಡಬಹುದು ಎಂದು ಪದೇ ಪದೇ ಹೇಳುತ್ತಿದ್ದರು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.