ಕೋಲ್ಕತ್ತ: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನಿಶ್ಚಿಂತಪುರದಲ್ಲಿ ಬಾಲಕನ ಮೃತದೇಹವೊಂದು ಶನಿವಾರ ಪತ್ತೆಯಾಗಿದ್ದು, ಆತನ ಸಾವಿಗೆ ಕಾರಣ ಎನ್ನಲಾದ ದಂಪತಿಯನ್ನು ಉದ್ರಿಕ್ತ ಗುಂಪೊಂದು ಹೊಡೆದು ಕೊಂದಿದೆ ಎಂದು ಪೊಲೀಸರು ತಿಳಿಸಿದರು.
ಮೂರನೇ ತರಗತಿಯ ಬಾಲಕ ಸ್ವರ್ಣಭಾ ಮಂಡಲ್ ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ. ಶನಿವಾರ ಬೆಳಿಗ್ಗೆ ಆತನ ಮೃತದೇಹವು ಆರೋಪಿಗಳ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಈ ಬೆನ್ನಲ್ಲೇ, ಬಾಲಕನ ಸಾವಿಗೆ ದಂಪತಿಯೇ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರನ್ನು ಒಳಗೊಂಡ ಉದ್ರಿಕ್ತ ಗುಂಪು ಆರೋಪಿಗಳಿಗೆ ಥಳಿಸಿ, ಅವರ ಮನೆಗೆ ಬೆಂಕಿ ಇಟ್ಟಿದೆ, ಆಸ್ತಿಗೆ ಹಾನಿ ಮಾಡಿದೆ ಎಂದು ಹೇಳಿದರು.
ತೀವ್ರವಾಗಿ ಗಾಯಗೊಂಡಿದ್ದ ಆರೋಪಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು.
‘ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ, ಆದರೆ ತನಿಖೆ ಪ್ರಗತಿಯಲ್ಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.