ಕೋಲ್ಕತ್ತ: ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜ್ಯಪಾಲರು ಆದಷ್ಟು ಬೇಗ ಸೂಚಿಸುವ ಸಾಧ್ಯತೆ ಎಂದು ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರು ಭಾನುವಾರ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ,‘ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ' ಎಂದು ಹೇಳಿದೆ.
ಜಲ್ಪೈಗುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖಾನ್ ಅವರು,‘ಆಡಳಿತ ಪಕ್ಷದಲ್ಲಿ ದಿನೇ ದಿನೇ ಭಿನ್ನಭಿಪ್ರಾಯಗಳು, ಅಸಮಾಧಾನಗಳು ಹೆಚ್ಚುತ್ತಿವೆ. ಹೀಗಿರುವಾಗ ಪಕ್ಷ ಈಗಲೂ ಬಹುಮತವನ್ನು ಹೊಂದಿದೆಯೇ ಎಂಬ ಪ್ರಶ್ನೆ ಮೂಡುತ್ತದೆ’ ಎಂದರು.
‘ತೃಣಮೂಲ ಕಾಂಗ್ರೆಸ್ ಅನ್ನು ವಿರೋಧಿಸಿ ಶಾಸಕರು ಹೊರ ನಡೆಯುತ್ತಿದ್ದರೆ, ರಾಜ್ಯಪಾಲರು ಆದಷ್ಟು ಬೇಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸುವ ಸಾಧ್ಯತೆಯಿದೆ’ ಎಂದರು.
ಮಮತಾ ಬ್ಯಾನರ್ಜಿ ಅವರ ಸಂಪುಟದ ಹಲವು ಸಚಿವರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಅವರು ತಿಳಿಸಿದರು.
ಇದಕ್ಕೆ ತಿರುಗೇಟು ನೀಡಿದ ಟಿಎಂಸಿ ಸಂಸದ ಸೌಗತಾ ರಾಯ್,‘ಬಿಜೆಪಿ ನಾಯಕರಿಗೆ ಸಂವಿಧಾನ ಮತ್ತು ಅದರ ನಿಬಂಧನೆಗಳ ಬಗ್ಗೆ ಏನೂ ತಿಳಿದಿಲ್ಲ. ರಾಜ್ಯಪಾಲರು ಇಂತಹ ಅಸಾಂವಿಧಾನಿಕ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂಬುದರ ಬಗ್ಗೆ ಖಾನ್ ಅವರಿಗೆ ತಿಳಿಯಲು ಹೇಗೆ ಸಾಧ್ಯ? ಚುನಾಯಿತ ಸರ್ಕಾರದ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಹೆಚ್ಚಿನ ಶಾಸಕರು ಮುಖ್ಯಮಂತ್ರಿಗಳ ಜತೆ ಇದ್ದಾರೆ. ವಿಧಾನಸಭೆಯಲ್ಲಿ ಟಿಎಂಸಿಗೆ 218 ಶಾಸಕರ ಬೆಂಬಲವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.