ಕೋಲ್ಕತ್ತ: ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಸತತ ಎರಡನೇ ದಿನವಾದ ಶನಿವಾರವೂ ಪಶ್ಚಿಮ ಬಂಗಾಳದ ಹೌರಾದಲ್ಲಿ ಪ್ರತಿಭಟನೆ ನಡೆದಿದ್ದು, ಹಲವು ಮನೆಗಳು ಬೆಂಕಿಗಾಹುತಿಯಾಗಿವೆ.
ಮತ್ತೊಂದೆಡೆ, ಜಾರ್ಖಂಡ್ನ ರಾಂಚಿಯಲ್ಲಿ ಶುಕ್ರವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಇಬ್ಬರು ಪ್ರತಿಭಟನಕಾರರು ಶನಿವಾರ ಮೃತಪಟ್ಟಿದ್ದಾರೆ. ನಗರದ ಹಲವು ಭಾಗಗಳಲ್ಲಿ ಬಿಗುವಿನ ಪರಿಸ್ಥಿತಿಯಿದ್ದು, ನಿಷೇಧಾಜ್ಞೆ ಹೇರಲಾಗಿದೆ.
ಘರ್ಷಣೆ: ಹೌರಾದ ಪಂಚಲಾ ಬಜಾರ್ ಎಂಬಲ್ಲಿ ಪೊಲೀಸರ ಜೊತೆ ಪ್ರತಿಭಟನಕಾರರು ಶನಿವಾರ ಘರ್ಷಣೆಗಿಳಿದು, ಕಲ್ಲು ತೂರಾಟ ನಡೆಸಿದರು. ಬಿಜೆಪಿ ಕಚೇರಿಯ ಮೇಲೆ ದಾಳಿ ನಡೆಯಿತು. ಗುಂಪು ಚದುರಿಸಲು ಅಶ್ರುವಾಯು ಸಿಡಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂಸಾಪೀಡಿತ ಹೌರಾಕ್ಕೆ ತೆರಳುತ್ತಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ್ ಮಜುಂದಾರ್ ಅವರನ್ನು ಪೊಲೀಸರು ಮಾರ್ಗಮಧ್ಯೆ ತಡೆದು ಬಂಧಿಸಿದರು.
ಮಹಾರಾಷ್ಟ್ರದ ನಾಸಿಕ್ನಲ್ಲಿ ಸಹ ಮುಸ್ಲಿಮರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
*
ಬಿಜೆಪಿ ಎಸಗುವ ಪಾಪಗಳಿಗೆ ಸಾಮಾನ್ಯ ಜನರನ್ನು ಏಕೆ ಬಲಿಪಶು ಮಾಡಲಾಗುತ್ತಿದೆ. ಹೌರಾ ಹಿಂಸಾಚಾರದ ಹಿಂದೆ ಕೆಲವು ರಾಜಕೀಯ ಪಕ್ಷಗಳ ಕೈವಾಡವಿದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.