ADVERTISEMENT

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಚಿವರ ಮೇಲೆ ಬಾಂಬ್ ದಾಳಿ; ಗಾಯ

ಪಿಟಿಐ
Published 18 ಫೆಬ್ರುವರಿ 2021, 1:09 IST
Last Updated 18 ಫೆಬ್ರುವರಿ 2021, 1:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ರಹ್ಮಾಪುರ (ಪ.ಬಂಗಾಳ): ಪಶ್ಚಿಮ ಬಂಗಾಳ ಸಚಿವ ಜಾಕೀರ್ ಹೊಸೈನ್ ಮೇಲೆ ಬುಧವಾರ ರಾತ್ರಿ ಕಚ್ಚಾ ಬಾಂಬ್ದಾಳಿ ನಡೆದಿದ್ದು, ಸಚಿವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿತಾ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಶಾಸಕರ ಜೊತೆಗಿದ್ದ ಇನ್ನಿತರ ಇಬ್ಬರು ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆಯ ಕಾವು ಏರುತ್ತಿರುವಾಗಲೇ ಅಹಿತಕರ ಘಟನೆ ನಡೆದಿದೆ.

ADVERTISEMENT

ಟಿಎಂಸಿ ಹಿರಿಯ ನಾಯಕ ಮಲಯ್ ಘಾತಕ್ ಪ್ರಕಾರ, ಪಕ್ಷದ ರಾಜಕೀಯ ವೈರಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ರಾತ್ರಿ 10 ಗಂಟೆ ಸುಮಾರಿಗೆ ಕೋಲ್ಕತ್ತಾಗೆ ರೈಲು ಹತ್ತಲು ನಿಲ್ದಾಣದಲ್ಲಿ ಕಾಯುತ್ತಿದ್ದ ಕಾರ್ಮಿಕ ಸಚಿವ ಹೊಸೈನ್ ಮೇಲೆ ದಾಳಿ ನಡೆದಿದೆ ಎಂದು ಬಂಗಾಳ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ತಿತಾ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಘಟನೆಯ ಹಿಂದಿನ ಆರೋಪಿಗಳನ್ನು ಸೆರೆ ಹಿಡಿಯಲು ತನಿಖೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಗಾಯಾಳು ಸಚಿವ ಹಾಗೂ ಇತರೆ ಇಬ್ಬರನ್ನು ಸ್ಥಳೀಯ ಜಂಗೀಪುರ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ.

ಸಚಿವರಿಗೆ ಕಾಲು ಹಾಗೂ ಕಿಬೊಟ್ಟೆಗೆ ಗಾಯವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೋಲ್ಕತ್ತಾಗೆ ಸ್ಥಳಾಂತರಿಸಲಾಗುತ್ತಿದೆ.

ಜಾಕೀರ್ ಮುರ್ಷಿದಾಬಾದ್‌ನ ಜನಪ್ರಿಯ ನಾಯಕರಾಗಿದ್ದು, ಸಾವಿರಾರು ಜನರು ಪಾಲ್ಗೊಂಡ ರ‍್ಯಾಲಿಯನ್ನು ಸಂಘಟಿಸಿದ್ದರು. ರಾಜಕೀಯ ವೈರಿಗಳು ಅವರನ್ನು ಕೊಲೆಗೈಯಲು ಯತ್ನಿಸಿದ್ದಾರೆ ಎಂದು ಘಾತಕ್ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.