ADVERTISEMENT

ಶಿಂಧೆ, ಫಡಣವಿಸ್, ಅಜಿತ್‌ರನ್ನು ಊಟಕ್ಕೆ ಆಹ್ವಾನಿಸಿದ ಶರದ್‌: ಬಿರುಸಿನ ಚರ್ಚೆ

ಪಿಟಿಐ
Published 29 ಫೆಬ್ರುವರಿ 2024, 16:15 IST
Last Updated 29 ಫೆಬ್ರುವರಿ 2024, 16:15 IST
ಅಜಿತ್ ಪವಾರ್, ಶರದ್ ಪವಾರ್
ಅಜಿತ್ ಪವಾರ್, ಶರದ್ ಪವಾರ್   

ಪುಣೆ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್‌ಚಂದ್ರ ಪವಾರ್) ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಹಾಗೂ ಅಜಿತ್ ಪವಾರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮಾರ್ಚ್ 2ರಂದು ಬಾರಾಮತಿಗೆ ಬರುತ್ತಿರುವ ಗಣ್ಯರಿಗೆ ತಮ್ಮ ಮನೆಯಲ್ಲಿ ಊಟ ಆಯೋಜಿಸಿರುವುದಾಗಿ ಶರದ್ ಹೇಳಿದ್ದಾರೆ. ಪಕ್ಷದ ವಿಭಜನೆ ಸೇರಿದಂತೆ ತಮ್ಮ ಹಲವು ಹಿನ್ನಡೆಗೆ ಕಾರಣರಾದವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರ ಹಿಂದಿನ ಮರ್ಮವೇನು ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಕಾಲೇಜು ಆವರಣದಲ್ಲಿ ‘ನಮೋ ಮಹಾರೋಜ್‌ಗಾರ್‌ ಮೇಳಾವ್’ ಆಯೋಜನೆಗೊಂಡಿದೆ. ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪಾಲ್ಗೊಳ್ಳುತ್ತಿದ್ದಾರೆ. 1999ರಲ್ಲಿ ತಾವೇ ಸ್ಥಾಪಿಸಿದ ಎನ್‌ಸಿಪಿ ಇಬ್ಭಾಗವಾದ ನಂತರ ಅದಕ್ಕೆ ಕಾರಣರಾದ ಅಜಿತ್ ಪವಾರ್ ಸಹಿತ ಹಲವರು ಶರದ್ ವಿರೋಧಿಗಳಾದರು. ಎನ್‌ಸಿಪಿ ಇಬ್ಭಾಗವಾದ ನಂತರ ಪಕ್ಷದ ಚಿಹ್ನೆಯೂ ಶರದ್ ಅವರಿಗೆ ಒಲಿಯಲಿಲ್ಲ. ತಮ್ಮ ವಿರೋಧಿ ಶಿವಸೇನಾ–ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಅಜಿತ್ ಪವಾರ್ ವಿರುದ್ಧ ಶರದ್ ಗುಡುಗಿದ್ದರು. ಆದರೆ ಇದೀಗ ಆಯೋಜನೆಗೊಂಡಿರುವ ಈ ಮೇಳದಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಈ ವಿರೋಧಿ ಬಣವನ್ನೇ ಊಟಕ್ಕೆ ಆಹ್ವಾನಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.