ADVERTISEMENT

ವಾಟ್ಸ್‌ಆ್ಯಪ್ ಸ್ಥಗಿತಗೊಂಡಾಗ ಗಾಬರಿ, ಬಂಗಾಳದಲ್ಲಿ ಅಭಿವೃದ್ಧಿಯೇ ಕುಂಠಿತ: ಮೋದಿ

ಏಜೆನ್ಸೀಸ್
Published 20 ಮಾರ್ಚ್ 2021, 8:18 IST
Last Updated 20 ಮಾರ್ಚ್ 2021, 8:18 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಕೋಲ್ಕತ್ತ: ವಾಟ್ಸ್‌ಆ್ಯಪ್ 50 ನಿಮಿಷಗಳಷ್ಟು ಕಾಲ ಸ್ಥಗಿತಗೊಂಡಾಗ ಎಲ್ಲರು ಗಾಬರಿಗೊಂಡರು. ಆದರೆ ಕಳೆದ 50-55 ವರ್ಷಗಳಿಂದ ಬಂಗಾಳದಲ್ಲಿ ಅಭಿವೃದ್ಧಿಕುಂಠಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ.

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಹಿನ್ನೆಲೆಯಲ್ಲಿ ಬಿಜೆಪಿ ಅಭಿಯಾನದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಿಂದಿನ ಎಡರಂಗ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಖರ್ಗಾಪುರದಲ್ಲಿ ನಡೆದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿನ್ನೆ (ಶುಕ್ರವಾರ) ವ್ಯಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ 50-55 ನಿಮಿಷಗಳಷ್ಟು ಕಾಲ ಸ್ಥಗಿತಗೊಂಡಾಗ ಎಲ್ಲರೂ ಗಾಬರಿಗೊಳಗಾದರು. ಆದರೆ ಬಂಗಾಳದಲ್ಲಿ ಅಭಿವೃದ್ಧಿ ಹಾಗೂ ಕನಸುಗಳು ಕಳೆದ 50-55 ವರ್ಷಗಳಲ್ಲಿ ಕುಸಿಯುತ್ತಿವೆ. ಮೊದಲಿಗೆ ಕಾಂಗ್ರೆಸ್, ನಂತರ ಎಡರಂಗ ಮತ್ತು ಈಗ ಟಿಎಂಸಿ ರಾಜ್ಯದ ಅಭಿವೃದ್ಧಿಯನ್ನು ನಿಷ್ಕ್ರಿಯಗೊಳಿಸಿದೆ' ಎಂದು ಆರೋಪಿಸಿದರು.

'ಕಾಂಗ್ರೆಸ್ ಮತ್ತು ಎಡಪಂಥೀಯರ ವಿನಾಶವನ್ನು ನೀವು ನೋಡಿದ್ದೀರಿ. ಟಿಎಂಸಿ ನಿಮ್ಮ ಕನಸುಗಳನ್ನು ಹಾಳು ಮಾಡಿದೆ. ಕಳೆದ 70 ವರ್ಷಗಳಲ್ಲಿ ನೀವು ಎಲ್ಲರಿಗೂ ಅವಕಾಶ ನೀಡಿದ್ದೀರಿ. ಆದರೆ ನಮಗೊಂದು ಐದು ವರ್ಷಗಳ ಅವಕಾಶ ನೀಡಿ. ಬಂಗಾಳವನ್ನು 70 ವರ್ಷಗಳ ವಿನಾಶದಿಂದ ಮುಕ್ತಿಗೊಳಿಸಲಿದ್ದೇವೆ. ನಿಮಗಾಗಿ ನಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತೇವೆ' ಎಂದು ಭರವಸೆ ನೀಡಿದರು.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಿಜೆಪಿಯನ್ನು ಆಶೀರ್ವದಿಸಲು ಬಂದಿರುವುದು ನಮಗೆ ಸಿಕ್ಕ ಗೌರವ. ಇದು ಸ್ಪಷ್ಟ ಸಂಕೇತವಾಗಿದ್ದು, 'ಬಂಗಾಳ್ ಮೇ ಈಸ್ ಬಾರ್ ಬಿಜೆಪಿ ಸರ್ಕಾರ್' (ಬಂಗಾಳದಲ್ಲಿ ಈ ಬಾರಿ ಬಿಜೆಪಿ ಸರ್ಕಾರ) ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.