ಬಾಂಬೆ ಹೈಕೋರ್ಟ್
ಮುಂಬೈ: ಸಂಭೋಗಕ್ಕೆ ಸಂಬಂಧಿಸಿದಂತೆ ಮಹಿಳೆಯು ‘ಕೂಡದು’ ಎಂದು ಅಸಮ್ಮತಿ ಸೂಚಿಸಿದರೆ ಅದನ್ನು ಹಾಗೆಯೇ ಪರಿಗಣಿಸಬೇಕು ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳ ವಿರುದ್ಧದ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಮಹಿಳೆ ‘ಕೂಡದು’ ಎಂದು ಹೇಳಿದ ಮೇಲೆ, ಆಕೆಯ ಹಿಂದಿನ ಲೈಂಗಿಕ ಚಟುವಟಿಕೆಗಳನ್ನು ಆಧರಿಸಿ ಒಪ್ಪಿಗೆಯನ್ನು ಊಹಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ನಿತಿನ್ ಸೂರ್ಯವಂಶಿ ಮತ್ತು ಎಂ.ಡಬ್ಲ್ಯೂ, ಚಂದ್ವಾನಿ ಅವರ ಪೀಠವು ಈ ಕುರಿತು ಮೇ 6ರಂದು ತೀರ್ಪು ನೀಡಿದೆ.
‘ಮಹಿಳೆಯ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆ ನಡೆಸಿದಾಗ ಅದು ಆಕೆಯ ದೇಹ, ಮನಸ್ಸು ಮತ್ತು ಖಾಸಗಿತನದ ಮೇಲಿನ ಹಲ್ಲೆ ಎಂದೇ ಪರಿಗಣಿಸಲಾಗುತ್ತದೆ’ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಅತ್ಯಾಚಾರವು ನೈತಿಕ ಮತ್ತು ದೈಹಿಕವಾಗಿ ಘೋರ ಅಪರಾಧವಾಗಿದೆ ಎಂದು ಅದು ಉಲ್ಲೇಖಿಸಿದೆ.
ಈ ಪ್ರಕರಣದಲ್ಲಿ ಮೂವರು ಅಪರಾಧಿಗಳ ವಿರುದ್ಧದ ಶಿಕ್ಷೆಯನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಆದರೆ, ಅವರ ಶಿಕ್ಷೆಯನ್ನು ಜೀವಾವಧಿಯಿಂದ 20 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿ ತೀರ್ಪು ನೀಡಿದೆ.
‘ಮಹಿಳೆಯು ಆರಂಭದಲ್ಲಿ ತಮ್ಮ ಮೂವರಲ್ಲಿ ಒಬ್ಬರೊಂದಿಗೆ ಸಂಬಂಧ ಹೊಂದಿದ್ದರು. ಬಳಿಕ ಇನ್ನೊಬ್ಬ ಪುರುಷನೊಂದಿಗೆ ಲಿವ್–ಇನ್ ಸಂಬಂಧ ಬೆಳೆಸಿಕೊಂಡಿದ್ದರು’ ಎಂದು ಈ ಅಪರಾಧಿಗಳು ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ಆದರೆ, ಮಹಿಳೆಯ ನೈತಿಕತೆಯನ್ನು ಪ್ರಶ್ನಿಸಲು ಅಪರಾಧಿಗಳು ಮಾಡಿದ ಈ ಪ್ರಯತ್ನಕ್ಕೆ ಹೈಕೋರ್ಟ್ ಛೀಮಾರಿ ಹಾಕಿತು.
‘ಮಹಿಳೆಯು ಪತಿಯಿಂದ ಬೇರ್ಪಟ್ಟ ಪತ್ನಿಯಾಗಿದ್ದರೂ, ವಿಚ್ಛೇದನ ಪಡೆಯದೆ ಇನ್ನೊಬ್ಬ ಪುರುಷನ ಜತೆ ವಾಸಿಸುತ್ತಿದ್ದರೂ, ಆಕೆಯ ಒಪ್ಪಿಗೆಯಿಲ್ಲದೆ ಯಾವುದೇ ವ್ಯಕ್ತಿಯು ಸಂಭೋಗಕ್ಕೆ ಒತ್ತಾಯಿಸುವಂತಿಲ್ಲ’ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
‘ಸಂತ್ರಸ್ತೆಯು ಅಪರಾಧಿಗಳ ಪೈಕಿ ಒಬ್ಬರ ಜತೆಗೆ ಈ ಹಿಂದೆ ಸಂಬಂಧದಲ್ಲಿ ಇದ್ದರೂ, ಆಕೆಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ಸಂಭೋಗಿಸಿದರೆ ಅದು ಅತ್ಯಾಚಾರಕ್ಕೆ ಸಮನಾಗುತ್ತದೆ’ ಎಂದು ಪೀಠ ಹೇಳಿದೆ.
2014ರ ನವೆಂಬರ್ನಲ್ಲಿ ಈ ಮೂವರು ಅಪರಾಧಿಗಳು ಸಂತ್ರಸ್ತೆಯ ಮನೆಗೆ ನುಗ್ಗಿ, ಆಕೆಯ ಜೊತೆಗಾರನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಮಹಿಳೆಯನ್ನು ಬಲವಂತವಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.