ತ್ರಿಶೂರ್: ನೀರಿಗಾಗಿ ನಲ್ಲಿ ತಿರುವಿದಾಗ ಮದ್ಯವೇ ಸುರಿದರೆ ಹೇಗಿರಬಹುದು. ಬಹುಶಃ ಮದ್ಯಪ್ರಿಯರಿಗೆ ಇದು ಒಳ್ಳೆ ಸುದ್ದಿ. ಆದರೆ, ಮಕ್ಕಳು ಮರಿ, ಮಹಿಳೆಯರಿರುವ ಮನೆಗಳಲ್ಲಿ ಹೀಗಾದರೆ ನಿಜಕ್ಕೂ ಫಜೀತಿ.
ಕೇರಳದ ತ್ರಿಶೂರಿನ ಚಲಕ್ಕುಡಿ ಎಂಬಲ್ಲಿ ಇಂಥದ್ದೇ ಸನ್ನಿವೇಶ ಎದುರಾಗಿದೆ. ಇಲ್ಲಿನ ಸೋಲೋಮನ್ ಅಪಾರ್ಟ್ಮೆಂಟ್ನ 18 ಮನೆಗಳಲ್ಲಿ ಕಳೆದ ಸೋಮವಾರದಿಂದ ನಲ್ಲಿ ತಿರುವಿದರೆ ಸಾಕು ಮದ್ಯ ಮಿಶ್ರಿತ ನೀರು ಬರುತ್ತಿದೆ. ಇದರಿಂದ ಇಡೀ 18 ಕುಟುಂಬಗಳೂ ಕಂಗಾಲಾಗಿ ಹೋಗಿವೆ.
ನೀರಿನಲ್ಲಿ ಮದ್ಯ ಮಿಶ್ರಣವಾಗಿರುವುದು ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಚಲಕ್ಕುಡಿಯಲ್ಲಿದ್ದ ಮದ್ಯದಂಗಡಿಯೊಂದರ ಮೇಲೆ ಆರು ವರ್ಷಗಳ ಹಿಂದೆ ದಾಳಿ ಮಾಡಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು 2200 ಲೀಟರ್ ಪ್ರಮಾಣದ ವಿವಿಧ ಬ್ರ್ಯಾಂಡ್ನ, ವಿವಿಧ ಬಗೆಯ ಮದ್ಯವನ್ನು ಜಪ್ತಿ ಮಾಡಿದ್ದರು. ಕೋರ್ಟ್ ಆದೇಶದಂತೆ ಅಷ್ಟೂ ಮದ್ಯವನ್ನು ಕಳೆದ ಭಾನುವಾರ ಅಧಿಕಾರಿಗಳು ಬಾರ್ ಪಕ್ಕದಲ್ಲೇ ಗುಂಡಿ ತೆಗೆದು, ಅದರಲ್ಲಿ ಸುರಿದಿದ್ದಾರೆ.
ಹೀಗೇ ಗುಂಡಿಯಲ್ಲಿ ಸುರಿದ ನೀರು ಭೂಮಿಗೆ ಇಂಗಿ, ಪಕ್ಕದಲ್ಲೇ ಇದ್ದ ತೆರೆದ ಬಾವಿಯ ನೀರಿಗೆ ಸೇರಿದೆ. ಹೀಗಾಗಿ ಈ ಬಾವಿಯ ನೀರನ್ನು ಬಳಸುವ 18 ಕುಟುಂಬಗಳ ಮನೆಯಲ್ಲಿ ನಲ್ಲಿ ತಿರುವಿದರೆ ಮದ್ಯ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಅಬಕಾರಿ ಅಧಿಕಾರಿಗಳು ಅಪಾರ್ಟ್ಮೆಂಟ್ ನಿವಾಸಿಗಳಿಗೆ 5000 ಲೀಟರ್ನಷ್ಟು ಶುದ್ಧ ನೀರಿನ ತಾತ್ಕಾಲಿಕಾಗಿ ವ್ಯವಸ್ಥೆ ಮಾಡಿದ್ದಾರೆ. ಬಾವಿಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಕುರಿತು ನಾಗರಿಕರು ಯಾವುದೇ ದೂರು ನೀಡಿಲ್ಲ ಎಂದು ಚಲಕ್ಕುಡಿ ಪೊಲೀಸರು ತಿಳಿಸಿದ್ದಾರೆ.
***
ಜಪ್ತಿ ಮಾಡಲಾದ 450 ಬಾಟೆಲ್ನಷ್ಟು ವಿವಿಧ ಮಾದರಿಯ ಮದ್ಯವನ್ನು ಕೋರ್ಟ್ನ ಸೂಚನೆಯಂತೆ ಭಾನುವಾರ ನಾಶ ಮಾಡಿದ್ದೆವು. ಆದರೆ, ನಾಶ ಮಾಡಲಾದ ಮದ್ಯ ಈ ರೀತಿಯ ತಾಪತ್ರಯ ಸೃಷ್ಟಿ ಮಾಡುತ್ತದೆ ಎಂದು ಗೊತ್ತಿರಲಿಲ್ಲ.
– ಅಬಕಾರಿ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.