
ದೆಹಲಿ ಸ್ಫೋಟ ನಡೆದ ಸ್ಥಳ
ಪಿಟಿಐ ಚಿತ್ರ
ಶ್ರೀನಗರ: ದೆಹಲಿ ಸ್ಫೋಟದ ತನಿಖೆ ಭಾಗವಾಗಿ ಪೊಲೀಸರು ವಿಚಾರಣೆ ನಡೆಸಿದ ತರುವಾಯ ಬೆಂಕಿ ಹಚ್ಚಿಕೊಂಡಿದ್ದ ಖಾಜಿಗಂದ್ನ ಒಣಹಣ್ಣು (ಡ್ರೈ ಫ್ರೂಟ್) ವ್ಯಾಪಾರಿ ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಾಪಾರಿ ಬಿಲಾಲ್ ಅಹ್ಮದ್ ವಾನಿ. ತೀವ್ರ ಸುಟ್ಟಗಾಯಗೊಂಡಿದ್ದ ಅವರು ಭಾನುವಾರ ರಾತ್ರಿ ಮೃತಪಟ್ಟರು ಎಂದು ವೈದ್ಯರು ಖಚಿತಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ವಾನಿ ಮತ್ತು ಅವರ ಪುತ್ರ ಜಾಸಿರ್ ಬಿಲಾಲ್ ಅವರನ್ನು ವೈಟ್ ಕಾಲರ್ ಭಯೋತ್ಪಾದಕ ಜಾಲದ ನಂಟಿನ ಶಂಕೆ ಮೇಲೆ ವಿಚಾರಣೆ ನಡೆಸಲಾಗಿತ್ತು. ಭಾನುವಾರ ಮಧ್ಯಾಹ್ನವೇ ವಾನಿ ಅವರನ್ನು ಬಿಟ್ಟು ಕಳಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಜಾಸಿರ್ ಪೊಲೀಸ್ ವಶದಲ್ಲಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಪ್ರಮುಖ ಸೂತ್ರಧಾರಿ ಎನ್ನಲಾದ ಡಾ.ಮುಜಫರ್ ರಾತರ್ ನಿವಾಸದ ಸಮೀಪ ವಾನಿ ಅವರ ಮನೆಯೂ ಇತ್ತು. ಹೀಗಾಗಿ ವಿಚಾರಣೆ ನಡೆದಿದೆ. ಮುಜಫರ್ ಅಫ್ಗಾನಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆತನ ಸೋದರ ಡಾ.ಅದೀಲ್ ರಾತರ್ ಅವರನ್ನು ಉತ್ತರಪ್ರದೇಶದ ಸಹರಾನ್ಪುರದಲ್ಲಿ ಬಂಧಿಸಲಾಗಿದೆ.
ವಾನಿ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ಸಂಬಂಧ ತನಿಖಾಧಿಕಾರಿಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಘಟನೆಯಿಂದ ಗಾಬರಿಗೊಂಡಿರುವ ಖಾಜಿಗಂದ್ ಜನರು, ಸ್ಥಳೀಯ ಅಧಿಕಾರಿಗಳು ಕಾರಣ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಇದು ಸಾಮಾನ್ಯವಾಗಿ ನಡೆಸುವ ಕಾನೂನು ಪ್ರಕ್ರಿಯೆಯಾಗಿದೆ. ಪ್ರಕರಣದ ಒಳಹೊಕ್ಕು ಪರಿಶೀಲಿಸಿದಾಗ ಮತ್ತಷ್ಟು ಮಾಹಿತಿ ಬಯಲಾಗಲಿದೆ’ ಎಂದು ಸ್ಥಳೀಯ ಪೊಲೀಸ್ ಮೂಲಗಳು ಹೇಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.