ಪವಣ್ ಕಲ್ಯಾಣ್
(ಪಿಟಿಐ ಚಿತ್ರ)
ಕಾಕಿನಾಡ: ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ಸಂಬಂಧಿಸಿದಂತೆ ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ನಡುವಣ ವಾಗ್ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, 'ದೇಶಕ್ಕೆ ಕೇವಲ ಎರಡಲ್ಲ, ಬಹುಭಾಷೆಗಳ ಅಗತ್ಯವಿದೆ' ಎಂದು ಹೇಳಿದ್ದಾರೆ.
'ದೇಶದ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ' ಎಂದು ಅವರು ಕೇಂದ್ರ ಸರ್ಕಾರಕ್ಕೆ ಬಂಬಲ ಸೂಚಿಸಿದ್ದಾರೆ.
ಜನಸೇನಾ ಪಕ್ಷದ 12ನೇ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ದೇಶಕ್ಕೆ ತಮಿಳು ಸೇರಿದಂತೆ ಬಹುಭಾಷೆಗಳ ಅಗತ್ಯವಿದೆ. ಆ ಮೂಲಕ ಏಕತೆ ಹಾಗೂ ಪ್ರೀತಿಯನ್ನು ಪಸರಿಸಬಹುದಾಗಿದೆ' ಎಂದು ಹೇಳಿದ್ದಾರೆ.
ತ್ರಿಭಾಷಾ ಸೂತ್ರವನ್ನು ಖಂಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ್ದರು.
ಈ ಸಂಬಂಧ ಡಿಎಂಕೆ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಪವಣ್ ಕಲ್ಯಾಣ್, 'ಅವರು ಹಿಂದಿ ಭಾಷೆಯನ್ನು ವಿರೋಧಿಸುತ್ತಾರೆ. ಆದರೆ ಹಣಕಾಸಿನ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿಯಲ್ಲಿ ಡಬ್ಬಿಂಗ್ ಮಾಡುತ್ತಾರೆ. ಅವರಿಗೆ ಬಾಲಿವುಡ್ನಿಂದ ದುಡ್ಡು ಬೇಕಿದೆ. ಇದೆಂಥಹ ನ್ಯಾಯ' ಎಂದು ಪ್ರಶ್ನಿಸಿದ್ದಾರೆ.
'ವಿವಿಧತೆಯಲ್ಲಿ ಏಕತೆಯೇ ನನ್ನ ಸಿದ್ಧಾಂತ ಎಂದಿರುವ ಕಲ್ಯಾಣ್, ಸನಾತನ ಧರ್ಮ ನನ್ನ ರಕ್ತದಲ್ಲಿ ಅಡಗಿದೆ' ಎಂದು ಹೇಳಿದ್ದಾರೆ.
'ನಿಜವಾದ ಮನೋಭಾವನೆಯಿಂದ ಜಾತ್ಯತೀತತೆಯನ್ನು ಆಳವಡಿಸಿಕೊಳ್ಳಬೇಕು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಲ. ದೇಶಕ್ಕಾಗಿ ಸಾಯಲು ಸಿದ್ಧವಿದ್ದೇನೆ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.